ಹಾಸನ: ಹಾಸನ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಭಾರೀ ಮಳೆಯಿಂದ ಎಲ್ಲಿ ನೋಡಿದರೂ ಭೂಕುಸಿತ, ಪ್ರವಾಹದಂತೆ ಹರಿಯುತ್ತಿರುವ ನೀರು, ಮನೆಗಳ ಹಾನಿ, ರೈತರ ಫಸಲಿಗೆ ಭಾರೀ ಹಾನಿಮಾಡಿದೆ. ಹೇಮಾವತಿ ನದಿ ಪ್ರವಾಹಕ್ಕೆ ತಗ್ಗು ಪ್ರದೇಶದ ಜನರು ಭಾರೀ ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.
ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಭಾರೀ ಮಳೆಯಿಂದ ಹೆಚ್ಚಿನ ಅನಾಹುತ ಸಂಭವಿಸಿದ್ದು, ಸಕಲೇಶಪುರದಲ್ಲಿ ಮತ್ತಷ್ಟು ಭೂಕುಸಿತ ಉಂಟಾಗುವ ಆತಂಕ ಎದುರಾಗಿದೆ. ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಸಂಚರಿಸಲು ವಾಹನ ಸವಾರರು ತೀವ್ರ ಪರದಾಟ ನಡೆಸುತ್ತಿದ್ದಾರೆ.
ಇನ್ನು ಹೇಮಾವತಿ ನದಿಯ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನದಿಗೆ ಬಿಡುವ ನೀರಿನ ಪ್ರಮಾಣವು ಹೆಚ್ಚಾಗಿದೆ. ಹೀಗಾಗಿ ಹೊಳೆನರಸೀಪುರ ಹಾಗೂ ಸಕಲೇಶಪುರದ ಅನೇಕ ಗ್ರಾಮಗಳು ಜಲಾವೃತವಾಗಿದ್ದು, ಪ್ರಮುಖ ರಸ್ತೆಗಳಂತೂ ಹೊಳೆಯಂತಾಗಿವೆ.
ಇನ್ನೊಂದೆಡೆ ಹೇಮಾವತಿ ನದಿಯ ನೀರು ಬಡಾವಣೆಗಳಿಗೂ ನುಗ್ಗಿದ್ದು, ಹಲವು ಬಡಾವಣೆಗಳು ಸಂಪೂರ್ಣ ಮುಳುಗಡೆಯಾಗಿವೆ. ಸಕಲೇಶಪುರದಲ್ಲಿ ಎಲ್ಲಿ ನೋಡಿದರೂ ಹೇಮಾವತಿ ನದಿಯ ನೀರು ಕಾಣುತ್ತಿದ್ದು, ಅಗತ್ಯ ವಸ್ತುಗಳನ್ನು ಕೊಳ್ಳಲು ಸಹ ಜನರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.





