ಹಾಸನ : ಭಾರೀ ಮಳೆಯಿಂದಾಗಿ ಐತಿಹಾಸಿಕ ಹಿನ್ನೆಲೆಯುಳ್ಳ ಸಕಲೇಶಪುರದ ಮುಂಜರಾಬಾದ್ ಕೋಟೆಯ ಒಂದು ಭಾಗ ಶನಿವಾರ ತಡರಾತ್ರಿ ಕುಸಿದಿದೆ.
ಸೈನಿಕರು ವಿಶ್ರಾಂತಿ ಪಡೆಯುತ್ತಿದ್ದ ಕೋಟೆಯ ಭಾಗ ಎಂದು ಹೇಳಲಾಗುವ ಪ್ರದೇಶವು ಕುಸಿದುಬಿದ್ದಿದೆ. ಮುಂಜಾನೆ ಕೋಟೆಯ ಕಾವಲು ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಬಂದಾಗ ಕುಸಿತಗೊಂಡಿರುವುದು ಗೊತ್ತಾಗಿದೆ.
ನಕ್ಷತ್ರಾಕಾರದ ಕೋಟೆ: ನಕ್ಷತ್ರಾಕಾರದಲ್ಲಿರುವ ಮಂಜರಾಬಾದ್ ಕೋಟೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ನೂರಾರು ಪ್ರವಾಸಿಗರು ಪ್ರತಿನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಹಾಗೂ ಐತಿಹಾಸಿಕ ಮಂಜರಾಬಾದ್ ಕೋಟೆಯನ್ನು 1792ರಲ್ಲಿ ಟಿಪ್ಪು ಸುಲ್ತಾನ್ ಕಟ್ಟಿಸಿದ್ದರು.
ಈ ಬೃಹತ್ ಕೋಟೆಯು ಸಮುದ್ರ ಮಟ್ಟದಿಂದ 988 ಮೀಟರ್ ಎತ್ತರದಲ್ಲಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಕೇಂದ್ರದಿಂದ 5 ಕಿ.ಮೀ. ಅಂತರದಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅಡಾಣಿ ಗುಡ್ಡದ ಮೇಲೆ ಈ ಕೋಟೆ ನಿರ್ಮಾಣವಾಗಿದೆ.





