ಹನೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ. ಪಿ. ನಡ್ಡಾ ಅವರ ಸೂಚನೆಯಂತೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಸೆ.17 ರಿಂದ ಮಹಾತ್ಮ ಗಾಂಧಿ ಜಯಂತಿ ಅ.2ರವರೆಗೆ ಭಾಜಪ ವತಿಯಿಂದ ವಿವಿಧ ಸಮಾಜಮುಖಿ ಸೇವಾ ಪಾಕ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಾಧ್ಯಮ ಸಹ ವಕ್ತಾರ ಬಸವರಾಜು ತಿಳಿಸಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿ.ಜೆ.ಪಿ ವಿವಿಧ ಮೋರ್ಚಾಗಳ ವತಿಯಿಂದ ರಕ್ತದಾನ ಶಿಬಿರ, ವಿಶ್ವ ಕ್ಷಯ ರೋಗ ನಿರ್ಮೂಲನೆ ಸಂಬಂಧಿತ ಕಾರ್ಯಕ್ರಮ, ಸಸಿ ನೆಡುವ ಕಾರ್ಯಕ್ರಮ, ಸ್ವಚ್ಛತಾ ಅಭಿಯಾನ, ಕಮಲೊತ್ಸವ, ಪಂಡಿತ್ ದೀನ್ ದಯಾಳ್ ಜಿ ರವರ ಕುರಿತು ಚರ್ಚೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸ್ವದೇಶಿ ಖಾದಿ ಆತ್ಮ ನಿರ್ಭರತೆ ಸರಳತೆ ಮತ್ತು ಶುಚಿತ್ವದ ಕುರಿತು ಅಭಿಯಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷ ವೆಂಕಟೇಗೌಡ ಮಾತನಾಡಿ, ಸೆ.17ರಿಂದ ಅ.2 ರ ಅವಧಿಯಲ್ಲಿ ಈ ದೇಶ ಕಂಡ ಅಪರೂಪದ ಮಹನೀಯರಾದ ಪ್ರಧಾನಿ ನರೇಂದ್ರ ಮೋದಿ, ದೀನ್ ದಯಾಳ್ ಉಪಾಧ್ಯಾಯ, ಲಾಲ್ ಬಹುದ್ದೂರ್ ಶಾಸ್ತ್ರಿ, ಮಹಾತ್ಮ ಗಾಂಧಿಯವರ ಜನ್ಮದಿನಾಚರಣೆಗಳು ಬರಲಿವೆ. ಇಂತಹ ಸುದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಹನೂರು ಭಾಜಪ ಕಾರ್ಯಾಲಯದಲ್ಲಿ ರಕ್ತದಾನ ಶಿಬಿರ, ಒಬಿಸಿ ಮೋರ್ಚಾ ವತಿಯಿಂದ ಬಿ. ವೆಂಕಟೇಶ್ ಅವರ ನೇತೃತ್ವದಲ್ಲಿ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಇದೇ ರೀತಿ 15 ದಿನಗಳವರೆಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ದಿನಗಳು ಬಿಜೆಪಿ ಕಾರ್ಯಕರ್ತರಿಗೆ ಹಬ್ಬದ ವಾತಾವರಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟರಾಜು( ರಣಧೀರ) ಹನೂರು ತಾಲೂಕು ಮಾಧ್ಯಮ ಸಂಚಾಲಕ ಮಧು, ಸಹ ವಕ್ತಾರ ಶಿವಕುಮಾರ್ ಉಪಸ್ಥಿತರಿದ್ದರು.