ಹನೂರು: ಪಟ್ಟಣದಲ್ಲಿ ಅಂಗಡಿ ಮಳಿಗೆಗಳ ಕಟ್ಟಡಗಳ ತೆರವು ಕಾರ್ಯವನ್ನು ಕೆ.ಶಿಫ್ ಅಧಿಕಾರಿಗಳು ಶುಕ್ರವಾರದಿಂದ ಪ್ರಾರಂಭಿಸಿದರು.
ಕೊಳ್ಳೇಗಾಲದಿಂದ ಹನೂರಿನವರೆಗೆ 23 ಕಿ.ಮೀ ರಸ್ತೆ ಅಭಿವೃದ್ಧಿಗೆ 108 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಈ ಹಿನ್ನಲೆ ಈ ಮಾರ್ಗದ ಹೊರವಲಯಗಳಲ್ಲಿ ರಸ್ತೆಯನ್ನು ನಿರ್ಮಿಸಲಾಗಿತ್ತು. ಅಲ್ಲದೇ ಮಂಗಲ, ಕಾಮಗೆರೆ ಗ್ರಾಮದಲ್ಲಿ ರಸ್ತೆ ಬದಿಯಲ್ಲಿನ ಕಟ್ಟಡಗಳನ್ನು ತೆರೆವುಗೊಳಿಸಲಾಗಿತ್ತು. ಆದರೆ ಹನೂರು ಪಟ್ಟಣದಲ್ಲಿ ಅಂಗಡಿ ಮಳಿಗೆ ಕಟ್ಟಡವನ್ನು ತೆರೆವುಗೊಳಿಸಿರಲಿಲ್ಲ. ಈ ಸಂಬಂಧ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ಆದಾಗ್ಯೂ ಅಂಗಡಿಯನ್ನು ಖಾಲಿ ಮಾಡಿರಲಿಲ್ಲ. ಇದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ತೊಡುಕಾಗಿ ಪರಿಣಮಿಸಿತ್ತು.

ಈ ಹಿನ್ನಲೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಕೊಳ್ಳೇಗಾಲದಿಂದ ಹನೂರಿನವರೆಗಿನ ಕೆ.ಶಿಫ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದರು. ಈ ದಿಸೆಯಲ್ಲಿ ಕಟ್ಟಡ ಮಾಲೀಕರಿಗೆ ಸೂಚನೆಯನ್ನು ನೀಡಲಾಗಿತ್ತು. ಆಗಾಗಿ ಶುಕ್ರವಾರ ಕೆ.ಶಿಫ್ ಅಧಿಕಾರಿಗಳು ಪಟ್ಟಣದಲ್ಲಿ ಕಟ್ಟಡಗಳ ತೆರೆವಿನ ಕಾರ್ಯಕ್ಕೆ ಮುಂದಾಗಿದ್ದಾರೆ.





