ಹನೂರು: ಸುದ್ದಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹರದನಹಳ್ಳಿ ರೆಹಮಾನ್ ಅವರ ಅಕಾಲಿಕ ನಿಧನದಿಂದ ಪತ್ರಿಕಾರಂಗ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಮಹಾದೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತ ರೆಹಮಾನ್ ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೆಹಮಾನ್ ಅವರು ಪತ್ರಿಕ ರಂಗಕ್ಕೆ ತಮ್ಮ ಜೀವವನ್ನು ಮುಡುಪಾಗಿಟ್ಟಿದ್ದರು. ಸಮಾಜಮುಖಿ ಕಳಕಳಿಯ ಸುದ್ದಿಗಳನ್ನು ಪ್ರಕಟಿಸುವಲ್ಲಿ ನಿಸ್ಸಿಮರಾಗಿದ್ದ ಅವರು ಸ್ನೇಹಜೀವಿಯಾಗಿದ್ದರು. ಹನೂರು ಭಾಗಕ್ಕೆ ಹಲವಾರು ಬಾರಿ ಸುದ್ದಿಗಾಗಿ ಬಂದಿದ್ದಾರೆ. ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ ಸೇರಿದಂತೆ ಅನೇಕ ಸಮಾಜಮುಖಿ ವರದಿಗಳನ್ನು ಬಿತ್ತರಿಸಿದ್ದಾರೆ ಎಂದು ಸ್ಮರಿಸಿದ ಅವರು ಪತ್ರಕರ್ತ ರೆಹಮಾನ್ ಕುಟುಂಬಕ್ಕೆ ನೋವು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ಇದೇ ವೇಳೆ ಪತ್ರಿಕಾಗೋಷ್ಠಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಣಗಳ್ಳಿ ಬಸವರಾಜು ಮಾತನಾಡಿ, ಪತ್ರಕರ್ತ ರೆಹಮಾನ್ ನನ್ನ ಒಡನಾಟ ಹಳೆಯದ್ದು, ನಮ್ಮ ಪ್ರಗತಿಪರ ಹೋರಾಟಗಾರರ ಪರವಾಗಿ ಧ್ವನಿಯಾಗಿದ್ದವರು. ಮೊನ್ನೆ ಕೂಡ ನಮ್ಮ ಕಾರ್ಯಕ್ರಮವನ್ನು ವರದಿ ಮಾಡಲಾಗಿದೆ ಎಂದು ನಮ್ಮೊಡನೆ ಮಾತನಾಡಿದ್ದರು. ಆದರೆ ಅವರು ಇಲ್ಲ ಎನ್ನುವುದು ಅತ್ಯಂತ ನೋವಿನ ಸಂಗತಿ. ಜಿಲ್ಲೆಯ ಪತ್ರಿಕ ರಂಗ ಹಾಗೂ ಪ್ರಗತಿಪರ ಸಂಘಟನೆಗಳಿಗೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬ ವರ್ಗದವರ ನೋವನ್ನು ಮರೆಸುವ ಶಕ್ತಿಯನ್ನು ದೇವರು ನೀಡಲಿ ಎಂದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಜಾವಾಣಿ ಕಣ್ಣೂರು ಬಸವರಾಜು, ಖಜಾಂಚಿ ಮಹಾದೇವಸ್ವಾಮಿ, ನಿರ್ದೇಶಕರಾದ ಸೋಮಶೇಖರ್, ಮಂಗಲ ಲಿಂಗರಾಜು, ಸದಸ್ಯರಾದ ಪ್ರಭುಸ್ವಾಮಿ, ರಮೇಶ್, ಅಜ್ಜಿಪುರ ಕಲಾರವಿ, ರಾಜೇಶ್, ಬಂಡಳ್ಳಿ ಶಿವಕುಮಾರ್ ಉಪಸ್ಥಿತರಿದ್ದರು.





