ಹನೂರು: ತಾಲ್ಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕೆ ಹೊಲದ ದೊರೆಸ್ವಾಮಿ ಎಂಬುವರಿಗೆ ಸೇರಿದ ಒಂದು ಎತ್ತುಗಳು ಚರ್ಮಗಂಟು ರೋಗಕ್ಕೆ ಬಲಿಯಾಗಿವೆ.
ಕಳೆದ ಒಂದು ವಾರದ ಹಿಂದೆ ಕಕ್ಕೆ ಮೂಲದ ತಂಗವೇಲು ಎಂಬುವವರಿಗೆ ಸೇರಿದ ಒಂದು ಹಸು ಚರ್ಮ ಗಂಟುರೋಗ ಬಂದು ಮೃತಪಟ್ಟಿತ್ತು. ತದನಂತರ ಸದಾಶಿವಪ್ಪ ಎಂಬವರಿಗೆ ಸೇರಿದ ಇಪ್ಪತ್ತಕ್ಕೂ ಹೆಚ್ಚು ಹಸುಗಳಿಗೆ ಚರ್ಮ ಗಂಟುರೋಗ ಕಾಣಿಸಿಕೊಂಡಿದ್ದ ಹಿನ್ನೆಲೆ ಜಿಲ್ಲಾ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಶಿವಣ್ಣ ಮಾರ್ಗದರ್ಶನದಲ್ಲಿ ತಾಲ್ಲೂಕು ಸಹಾಯಕ ನಿರ್ದೇಶಕ ಸಿದ್ದರಾಜು ಹಾಗೂ ಪರಿವೀಕ್ಷಕರು ಪೊನ್ನಾಚಿ ಗ್ರಾಮಕ್ಕೆ ಭೇಟಿ ನೀಡಿ 1400 ರಾಸುಗಳಿಗೆ ಭಾನುವಾರ ಚಿಕಿತ್ಸೆ ನೀಡಿದ್ದರು. ಇದಲ್ಲದೆ ಚರ್ಮ ಗಂಟುರೋಗ ತಡೆಗಟ್ಟುವ ನಿಟ್ಟಿನಲ್ಲಿ ಚುಚ್ಚುಮದ್ದು ಸಹ ನೀಡಲಾಗಿತ್ತು. ಆದರೂ ಸಹ ಕಕ್ಕೆ ಹೊಲದ ದೊರೆಸ್ವಾಮಿ ಎಂಬುವವರ ಎತ್ತು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ಕಳೆದ ಒಂದು ವಾರದಿಂದೀಚೆಗೆ 4 ಹಸುಗಳು ಮೃತಪಟ್ಟಿರುವುದರಿಂದ ಈ ಭಾಗದ ರೈತರು ಕಂಗಾಲಾಗಿದ್ದಾರೆ.
ಪೊನ್ನಾಚಿ ಭಾಗದ ರೈತರಿಗೆ ಚರ್ಮ ಗಂಟುರೋಗ ದೊಡ್ಡ ಆಘಾತ ನೀಡಿದೆ. ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ರೈತರ ಬದುಕು ಬೀದಿಗೆ ಬಂದಂತಾಗಿದೆ. ಈ ಕೂಡಲೇ ಪಶುಪಾಲನಾ ಇಲಾಖೆಯ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಚರ್ಮ ಗಂಟು ರೋಗ ನಿಯಂತ್ರಣಕ್ಕೆ ತರುವಲ್ಲಿ ಕ್ರಮಕೈಗೊಳ್ಳಬೇಕು ಹಾಗೂ ಮೃತಪಟ್ಟಿರುವ ರಾಸುಗಳಿಗೆ ಶೀಘ್ರವೇ ಪರಿಹಾರ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಜೀವಿ ರಾಜು ಒತ್ತಾಯಿಸಿದ್ದಾರೆ.