Mysore
27
scattered clouds

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ಹನುಮ ಧ್ವಜ ತೆರವು ಪ್ರಕರಣ: ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ ಹೆಚ್‌ಡಿಕೆ

ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದನ್ನು ಖಂಡಿಸಿ ಬಿಜೆಪಿ, ಜೆಡಿಎಸ್‌, ಭಜರಂಗದಳ, ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಕೆರಗೋಡು ಗ್ರಾಮದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪಾದಯಾತ್ರೆ ಹಮ್ಮಿಕೊಂಡಿದ್ದರು.

ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಜಮಾಯಿಸಿದ ಕಾರ್ಯಕರ್ತರು ಜೈ ಶ್ರೀರಾಮ್‌ ಘೋಷಣೆ ಕೂಗಿದರು. ಈ ಪ್ರತಿಭಟನೆಯಲ್ಲಿ ಹೆಚ್‌ ಡಿ ಕುಮಾರಸ್ವಾಮಿ ಸಹ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುವ ಮೂಲಕ ತಮ್ಮ ಮಾತನ್ನು ಆರಂಭಿಸಿದರು.

ಹನುಮ ಧ್ವಜ ತೆರವುಗೊಳಿಸಿದ್ದರ ವಿರುದ್ಧ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಹಾಗೂ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಒಬ್ಬನ ಕಣ್ಣಿಗೆ ತೀವ್ರ ಏಟು ಬಿದ್ದಿದೆ. ಕಣ್ಣು ಹೋಗಿದ್ದರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಣ್ಣು ತಂದು ಕೊಡುತ್ತಿದ್ರಾ? ಪೊಲೀಸರೇ ಎಚ್ಚರವಾಗಿರಿ. ಇನ್ನೆಷ್ಟು ದಿನ ನಿಮ್ಮ ಆಟ ನಡೆಯುತ್ತದೆಯೋ ನಾನೂ ನೋಡುತ್ತೇನೆ. ಯಾವನೋ ಹೇಳುತ್ತಾನೆ ಅಂತ ಹೇಗೆ ಬೇಕೋ ಹಾಗೆ ಕೆಲಸ ಮಾಡುವುದನ್ನು ನಾನು ಒಪ್ಪಲಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಕೆರಗೋಡು ಗ್ರಾಮದಲ್ಲಿ ನಡೆದ ಸಂಘರ್ಷಕ್ಕೆ ಸರ್ಕಾರವೇ ಕಾರಣವಾಗಿದೆ. ಮೊದಲು ಜಿಲ್ಲಾಧಿಕಾರಿಯನ್ನು ಅಮಾನತು ಮಾಡಿ ಹೊರಗೆ ಕಳುಹಿಸಿ. ಆ ಘಟನೆಗೆಲ್ಲಾ ಮಂಡ್ಯ ಜಿಲ್ಲಾಧಿಕಾರಿಯೇ ಕಾರಣ. ಹನುಮಂತನನ್ನು ಕೆಣಕಿದ್ದಕ್ಕೆ ಲಂಕಾದಹನವಾಯಿತು. ಅದೇ ರೀತಿ ನಿಮ್ಮ ಅವನತಿ ಆಗುತ್ತದೆ. ಸಿದ್ದರಾಮಯ್ಯನವರೇ ಹೆಸರಿನಲ್ಲಿ ರಾಮ ಇದ್ದರೆ ಸಾಲದು. ನಿಮ್ಮಲ್ಲಿ ರಾಮನ ನಡವಳಿಕೆ ಇರಬೇಕು. ಇಲ್ಲಿ ನಡೆದ ಲಾಠಿ ಚಾರ್ಜ್‌ ಸರ್ಕಾರದ ರಾಕ್ಷಸ ಪ್ರವೃತ್ತಿಯನ್ನು ಘೋಷಿಸುತ್ತದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ. ನಿಮ್ಮ ತಪ್ಪನ್ನು ತಿದ್ದುಕೊಳ್ಳಿ. ರಾಜಕೀಯ ಮಾಡಿದ್ದು ನೀವು. ಅಧಿಕಾರದ ಅಮಲಿನಲ್ಲಿ ದೈಹಿಕ ಹಲ್ಲೆ ಮಾಡಿಸಿದ್ದೀರಿ. ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವ ಪ್ರಶ್ನೆ ಇಲ್ಲ. ನಮ್ಮ ಕಾರ್ಯಕರ್ತರಿಗೆ ದೈಹಿಕವಾಗಿ ಪೆಟ್ಟು ಕೊಟ್ಟಿದ್ದೀರಿ. ಇದಕ್ಕಾಗಿ ಅಧಿಕಾರಿಗಳಿಗೆ ಪ್ರಾಯಶ್ಚಿತವಾಗಲೇಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಇದು ರಾಜಕೀಯ ಲಾಭ ಅಥವಾ ನಷ್ಟದ ಹೋರಾಟವಲ್ಲ. ಧ್ವಜ ಸ್ತಂಭ ವಿಚಾರದಲ್ಲಿ ಸುಳ್ಳು ದಾಖಲೆ ಸೃಷ್ಟಿಯಾಗಿದೆ. ಅಧಿಕಾರಿಗಳನ್ನು ಬಳಸಿಕೊಂಡು ಉದ್ಧಟತನ ತೋರಿಸುತ್ತಿದ್ದಾರೆ. ಅಧಿಕಾರಿಗಳು ತಕ್ಷಣ ಕೆರಗೋಡಿನಲ್ಲಿ ಶಾಂತಿ ಸಭೆ ಕರೆಯಬೇಕು. ಧ್ವಜದ ಮರುಸ್ಥಾಪನೆಯಾಗಬೇಕು, ಅಲ್ಲಿಯವರೆಗೂ ನಮ್ಮ ಹೋರಾಟವಿರುತ್ತದೆ. 144 ಸೆಕ್ಷನ್‌ ಮೊದಲು ಕಿತ್ತುಹಾಕಿ. ಜನರು ಕೆರಳಿದರೆ ಪೊಲೀಸರಿಂದ ತಡೆಯಲು ಆಗುವುದಿಲ್ಲ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!