ಹನೂರು : ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಘೋಷಣೆ ಮಾಡುವ ಮೊದಲು ಬೆಟ್ಟದ ತಪ್ಪಲಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಲೆ ಮಾದೇಶ್ವರ ಬೆಟ್ಟದ ದೇವಾಲಯದ ಮುಂಭಾಗದಿಂದ ಹೊರಟ ಪ್ರತಿಭಟನೆ ಮೆರವಣಿಗೆ ಕೊಳ್ಳೇಗಾಲ ಮುಖ್ಯರಸ್ತೆಯ ಚೆಕ್ ಪೋಸ್ಟ್ ಸಮೀಪ ಜಮಾವಣೆಗೊಂಡು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು.
ಸರ್ಕಾರ ಮಲೆ ಮಾದೇಶ್ವರ ವನ್ಯ ಧಾಮವನ್ನು ಹುಲಿ ಸಂರಕ್ಷಣಾ ಪ್ರದೇಶವಾಗಿ ಘೋಷಿಸುವ ಮೊದಲು ತಪ್ಪಲಿನ ಹಾಡಿಗಳಲ್ಲಿ ಕುಡಿಯುವ ನೀರು,ರಸ್ತೆ, ವಿದ್ಯುತ್, ಸಾರಿಗೆ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಬೇಕು. ಕಾನೂನು ಅಡಿಯಲ್ಲಿ ಬದುಕಲು ಎಲ್ಲ ರೀತಿಯ ಅವಕಾಶಗಳು ಸಿಗುವಂತೆ ಕಾನೂನು ಅಡಿಯಲ್ಲಿ ಲಿಖಿತ ಮೂಲಕ ಸರ್ಕಾರದಿಂದ ನಡವಳಿ ರೂಪಿಸಬೇಕು ಎಂದರು.
ಬೆಟ್ಟದ ತಪ್ಪಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್ ಇಲ್ಲದ ಪರಿಣಾಮ ಸೋಲಾರ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ನಿರ್ವಹಣೆ ಮಾಡಬೇಕಾದ ಕಂಪನಿಗಳು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆ ಪದೇ ಪದೇ ಸಮಸ್ಯೆ ಕಾಡುತ್ತಿರುವುದರಿಂದ ಕಗ್ಗತ್ತಿನಲ್ಲಿ ಜನ ಕಾಲ ಕಳೆಯುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೆ ಸೋಲಾರ್ ಪರಿಕರಗಳನ್ನು ಹಿಂದಿರುಗಿಸಿ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆ ಮಾದೇಶ್ವರ ಬೆಟ್ಟದಲ್ಲಿ ಆರೋಗ್ಯ ಸೇವೆ ಸಿಗದ ಪರಿಣಾಮ ನೆರೆಯ ತಮಿಳುನಾಡಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕಾಗಿದೆ ಕಳೆದ ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಮಲೆ ಮಾದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಭರವಸೆ ನೀಡಿದ್ದರು. ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಈ ಕೂಡಲೇ ಸಂಬಂಧಪಟ್ಟ ಆರೋಗ್ಯ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಹೊನ್ನೂರು ಬಸವಣ್ಣ ಮಾತನಾಡಿ ಚೆಂಗಡಿ ಗ್ರಾಮ ಸ್ಥಳಾಂತರ ಮಾಡುವ ಯೋಜನೆ ನೆನೆಗುದ್ದಿಗೆ ಬಿದ್ದಿದೆ. ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳಿಗೂ ಮನವಿ ನೀಡಿದ್ದರು ಇದುವರೆಗೂ ಸ್ಥಳಾಂತರ ಪೂರ್ಣಗೊಂಡಿಲ್ಲ. ಮಲೆಮಹದೇಶ್ವರ ಡಿ ಸಿ ಎಫ್ ಸಂತೋಷ್ ಕುಮಾರ್ ರವರಿಗೆ ಕಾಡಿನ ಬಗ್ಗೆ ಅರಿವೇ ಇಲ್ಲ, ಸ್ಥಳಾಂತರದ ಬಗ್ಗೆ ಅವರಿಗೂ ಸಹ ಮನವರಿಕೆ ಮಾಡಿದ್ದರು ಇದುವರೆಗೂ ಸ್ಪಂದಿಸಿಲ್ಲ ಅವರು ಕೇವಲ ದುಡ್ಡು ಮಾಡಲು ಬಂದಿದ್ದಾರೆ. ಮುಂದಿನ ತಿಂಗಳು ಮುಖ್ಯಮಂತ್ರಿಗಳು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಗೋ ಬ್ಯಾಕ್ ಸಿಎಂ ಅಭಿಯಾನ ಪ್ರಾರಂಭ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಸಿಎಫ್ ನಂದಕುಮಾರ್ ಮಾತನಾಡಿ ನಿಮ್ಮ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಡಿಎಚ್ಒ ಡಾ. ವಿಶ್ವೇಶ್ವರಯ್ಯ ಮಾತನಾಡಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಲು 13 ಕೋಟಿ ವೆಚ್ಚದಲ್ಲಿ ಕ್ರಿಯೆ ಯೋಜನೆ ರೂಪಿಸಲಾಗಿದ್ದು ಮುಖ್ಯಮಂತ್ರಿಗಳು ಮುಂದಿನ ತಿಂಗಳು ಭೂಮಿ ಪೂಜೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. ತಾಲೂಕು ಅಧ್ಯಕ್ಷ ಅಂಗಡಿ ಕರಿಯಪ್ಪ, ಶಾಂತಕುಮಾರ್, ಬೇಡ ಕೆಂಪಣ್ಣ ಸಮುದಾಯದ ಹಿರಿಯ ಮುಖಂಡ ಕೆವಿ ಮಾದೇಶ್, ರೈತ ಸಂಘಟನೆಯ ಮಹದೇವಸ್ವಾಮಿ ನಾಗ ಕೆಂಪಯ್ಯ ಮಂಜುನಾಥ್ ಸೇರಿದಂತೆ ಪಾಲ್ಗೊಂಡಿದ್ದರು.





