ನಂಜನಗೂಡು, ಫೆ 4: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೋಣನೂರು ಹಾಗೂ ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತುಕೊಂಡಿದ್ದು, ಅರಣ್ಯ ಪ್ರದೇಶದ ಒಂದಿಷ್ಟು ಭಾಗ ಸುಟ್ಟು ಕರುಕಲಾಗಿದೆ.
ಕೋಣನೂರು ಗ್ರಾಮದ ಹೊರವಲಯದಲ್ಲಿರುವ ಎತ್ತಿನ ಮುಂಟಿ ಪ್ರದೇಶದಲ್ಲಿ ನಿನ್ನೆ ( ಫೆಬ್ರವರಿ 3 ) ಬೆಂಕಿ ಕಾಣಿಸಿಕೊಂಡಿದ್ದು, ಸುಳಿಗಾಳಿಗೆ ಸಿಲುಕಿದ ಕಾರಣ ಮೇವಿನ ಪ್ರದೇಶಕ್ಕೂ ಬೆಂಕಿ ವ್ಯಾಪಿಸಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯ ರೈತರು ಬೆಂಕಿ ಆರಿಸಲು ಹರಸಾಹಸಪಟ್ಟಿದ್ದಾರೆ.
ಸದ್ಯ ಈ ಘಟನೆಯಿಂದ ಅಪಾರ ಪ್ರಮಾಣದ ಮೇವು ನಾಶವಾಗಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಸ್ಥಳೀಯರು ಅರಣ್ಯಕ್ಕೆ ಬೆಂಕಿ ಬೀಳದ ಹಾಗೆ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.





