Mysore
17
overcast clouds

Social Media

ಮಂಗಳವಾರ, 10 ಫೆಬ್ರವರಿ 2026
Light
Dark

ಮೊನ್ನೆ ಮಾರಿಗೆ 40 ರೂ. ಇದ್ದ ಸೇವಂತಿಗೆ ಇಂದು 300 ರೂ. !

ಮೈಸೂರು: ಒಂದು ಮಾರು ಸೇವಂತಿಗೆಗೆ 300 ರೂ…. ಅಯ್ಯೋ, ಅಷ್ಟೊಂದಾ ಎಂದರೆ, “ಬೇಕಿದ್ದರೆ ತಗೊಳ್ಳಿ. ಇಲ್ಲವಾದರೆ ಬಿಡಿʼಎನ್ನುವ ಉತ್ತರ. ಇನ್ನು ಮುಂದಕ್ಕೆ ಸಾಗಿದರೆ 200 ರೂ. ಗೂ ಮಾರುವವರಿದ್ದಾರೆ. ಆದರೆ ಹೂವು ತಾಜಾ ಇಲ್ಲ ಎನ್ನುವ ಕೊರಗು. ಇನ್ನೂ ಸ್ವಲ್ಪ ಮುಂದಕ್ಕೆ ನೋಡೋಣ ಎಂದು ಮುಂದುವರಿದರೆ 150ರೂ.ಗೂ ಮಾರು ಲಭ್ಯ. ಆದರೆ ಬಿಡಿ, ಬಿಡಿಯಾಗಿ ಕಟ್ಟಿದ ಮಾರಿನಲ್ಲಿ ಹೂವಿಗಿಂತ ದಾರವೇ ಎದ್ದು ಕಾಣುತ್ತಿತ್ತು…ಇದು ಮೈಸೂರಿನ ಎಂ. ಜಿ. ರಸ್ತೆಯಲ್ಲಿ ಸೋಮವಾರ ಕಂಡು ಬಂದ ಚಿತ್ರಣ.

ಬೆಲೆ ಏರಿಕೆಯಲ್ಲಿ ನಲುಗಿರುವ ಜನಸಾಮಾನ್ಯರು, ಸೋಮವಾರ ಆಯುಧ ಪೂಜೆಗೆ ಅಗತ್ಯವಾದ ಹೂವು, ನಿಂಬೆ, ಕುಂಬಳಕಾಯಿ ಜತೆ ಒಂದಷ್ಟು ತರಕಾರಿಗಳ ಖರೀದಿಗೆ ಮುಗಿಬಿದ್ದಿದ್ದರು. ಆದರೆ ಹೂವು- ಹಣ್ಣುಗಳ ಬೆಲೆ ಕೇಳಿ ಎಲ್ಲರೂ ಮುಖವೂ ಬಾಡಿ ಹೋಗುತ್ತಿತ್ತು. ಸಾಂಪ್ರದಾಯಿಕ ಹಬ್ಬದ ಆಚರಣೆ ಕೈ ಬಿಡಲಾಗದೆ, ಬೇಕಾದ ಪರಿಕರಗಳನ್ನು ಮನಸ್ಸಿಗೆ ಹಿಡಿಸುವಷ್ಟು ಕೊಳ್ಳಲಾಗದೆ ಪರಿತಪಿಸುವ ದೃಶ್ಯ ಅವರ ಮುಖಭಾವದಲ್ಲೇ ಕಾಣುತ್ತಿತ್ತು.


ಕಳೆದ ವಾರ ಒಂದು ಮಾರಿಗೆ 30 ರಿಂದ 40 ರೂ. ಇದ್ದ ಸೇವಂತಿಗೆ ಸೋಮವಾರ 150 ರಿಂದ 300 ರೂ.ಗೆ ಮಾರಾಟವಾಗುತ್ತಿದ್ದುದು ಕಂಡುಬಂತು. ಆದರೆ ಇಲ್ಲಿ ರೈತರಿಗಿಂತ ಮಧ್ಯವರ್ತಿಗಳ ಆಟ ಎದ್ದು ಕಾಣುತ್ತಿತ್ತು. ಇನ್ನು ಬಿಡಿ ಹೂಗಳ ಬೆಲೆ ಕೂಡ ಗ್ರಾಹಕರ ಕೈ ಸುಡುತ್ತಿದೆ. ದೇವರಾಜ ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂ ಕೆಜಿ ಒಂದಕ್ಕೆ ಒಂದು ಸಾವಿರ ರೂ., ಕಾಕಡ 800 ರೂ., ಮರ್ಲೆ 6೦೦ ರೂ., ಸುಗಂಧರಾಜ 280 ರೂ., ಕನಕಾಂಬರ 1500 ರೂ., ಗುಲಾಬಿ ಹೂ ಕೆಜಿಗೆ 320 ರೂ.ಗೆ ಮಾರಾಟವಾಗಿದೆ.

ಆಯುಧ ಪೂಜೆಗೆ ಬಳಸಲಾಗುವ ಬೂದುಗುಂಬಳ ಕೂಡ ಗ್ರಾಹಕರ ಕೈ ಸುಡುತಿದ್ದು, ಕೆಜಿ 40 ರಿಂದ 50 ರೂ.ಗೆ ಮಾರಾಟವಾಗುತ್ತಿದೆ. ಅನ್ಯ ರಾಜ್ಯಗಳಿಂದಲೂ ಬೂದುಗುಂಬಳ ಬಂದಿಲ್ಲ ದಸರಾ ಹಬ್ಬಕ್ಕೆಂದು ತಮಿಳುನಾಡು, ಆಂಧ್ರಪ್ರದೇಶದಿಂದ ರಾಶಿಗಟ್ಟಲೆ ಬೂದುಗುಂಬಳಕಾಯಿ ಮಾರುಕಟ್ಟೆಗೆ ಬರುತ್ತಿತ್ತು. ಈ ಬಾರಿ ಅನ್ಯ ರಾಜ್ಯಗಳಲ್ಲೂ ಮಳೆಯಿಂದ ಬೆಳೆಯಿಲ್ಲ. ಹೀಗಾಗಿ, ತುಂಬಾ ಕಡಿಮೆ ಪ್ರಮಾಣದಲ್ಲಿ ಬೂದುಗುಂಬಳ ಬಂದಿದೆ. ಆದರೆ ಬೇಡಿಕೆ ಹೆಚ್ಚಾಗಿರುವುರಿಂದ ಬೆಲೆಗಳು ಗಗನಕ್ಕೇರಿವೆ.

ಹಣ್ಣು ತರಕಾರಿಗಳ ಬೆಲೆ ಈ ಬಾರಿ ಹಬ್ಬಕ್ಕೆ ಮುನ್ನವೇ ಏರಿಕೆಯಾಗಿತ್ತು. ಟೊಮೆಟೋ, ಬೆಂಡೆಕಾಯಿ ಹೊರತುಪಡಿಸಿ ಬಹುತೇಕ ಎಲ್ಲ ತರಕಾರಿಗಳ ಬೆಲೆ 50ರ ಆಸುಪಾಸು ದಾಟಿದ್ದು, ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.

ರಾಜ್ಯದಲ್ಲಿ ಸುಮಾರು 2 ತಿಂಗಳಿನಿಂದ ಸುರಿದ ನಿರಂತರ ಮಳೆಗೆ ತರಕಾರಿ ಹೊಲದಲ್ಲೇ ಕೊಳೆತು ಹೋಗಿವೆ. ಹೀಗಾಗಿ ಮಾರುಕಟ್ಟೆಗೆ ತರಕಾರಿ ಬರುವ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ತರಕಾರಿ ಖರೀದಿಗೆಂದು ಬರುವ ಗ್ರಾಹಕರು ತರಕಾರಿ ಬೆಲೆ ಕಂಡು ಹೌಹಾರುವಂತಾಗಿದೆ.

ಸುಮಾರು ಒಂದು ತಿಂಗಳಿನಿಂದ ಖರೀದಿದಾರರಿಗೆ ತರಕಾರಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಒಂದು ತಿಂಗಳ ಹಿಂದೆ ಇದ್ದ ದರ ಇಂದು ಇಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಕೆಲ ತರಕಾರಿಗಳ ಬೆಲೆ ಮೂರು ಪಟ್ಟು ಹೆಚ್ಚಳವಾಗಿದೆ. ಹೊಸದಾಗಿ ತರಕಾರಿ ಬೆಳೆ ರೈತರ ಕೈ ಸೇರುವವರೆಗೂ ಜನರು ಇದೇ ಸ್ಥಿತಿಯನ್ನು ಎದುರಿಸಬೇಕು ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಒಂದು ಕೆಜಿ ಕ್ಯಾರೇಟ್ ಬೆಲೆ 80 ರೂ. ಮುಟ್ಟಿದೆ. ಕೆಜಿ ಬೀನ್ಸ್ 75 ರಿಂದ 80 ರೂ.ಗೆ ಮಾರಾಟವಾಗುತ್ತಿದೆ. ಹಾಗಲಕಾಯಿಯೂ 50 ಗಡಿ ದಾಟಿದೆ. ಸೀಮೆ ಬದನೆ ಮಾತ್ರ 25ರೂ. ಗೆ ಸಿಗುತ್ತಿದೆ.

ಕ್ಯಾರೇಟ್ 80 ರೂ.

ಬೀನ್ಸ್ 75 ರಿಂದ 80 ರೂ.

ಮೂಲಂಗಿ 60 ರೂ.

ದಪ್ಪ ಮೆಣಸಿನಕಾಯಿ 70 ರೂ.

ಬದನೆಕಾಯಿ- 50 ರೂ.

ಹೀರೆಕಾಯಿ 70 ರೂ.

ಸೋರೆಕಾಯಿ 40 ರೂ.

ಟೊಮ್ಯಾಟೋ 40 ರೂ.

ಹಸಿ ಮೆಣಸಿನಕಾಯಿ 70 ರೂ.

ಬೀಟ್‌ರೂಟ್ 50 ರೂ.

ಗೆಡ್ಡೆ ಕೋಸು 50 ರೂ.

ಹೂ ಕೋಸು 50 ರೂ.

ಸೌತೇಕಾಯಿ 50 ರೂ.

ಹೀರೇಕಾಯಿ 70 ರೂ.

ಹಾಗಲಕಾಯಿ 50 ರೂ.

ಸೀಮೆ ಬದನೆ 25 ರೂ.

ಹೂಕೋಸು – 45.00

ಕೊತ್ತಂಬರಿ ಸೊಪ್ಪು – 20.00

ನುಗ್ಗೆಕಾಯಿ -70

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!