ಕ್ರಮ ವಹಿಸದಿದ್ದರೆ ಚುನಾವಣೆಯಲ್ಲಿ ಬಹಿಷ್ಕಾರ ಎಚ್ಚರಿಕೆ
ಚಾಮರಾಜನಗರ: ತಾಲ್ಲೂಕಿನ ಅಮಚವಾಡಿ ಗ್ರಾಮದ ನಾಯಕರ ರಾಜಬೀದಿ ರಸ್ತೆಯನ್ನು ದುರಸ್ತಿ ಹಾಗೂ ಚರಂಡಿ ನಿರ್ಮಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ರಸ್ತೆ ಬಳಿ ಸಮಾವೇಶಗೊಂಡ ಪ್ರತಿಭಟನಾನಿರತರು ಆಗಲಿ ಆಗಲಿ ರಸ್ತೆ, ಚರಂಡಿ ನಿರ್ಮಾಣವಾಗಲಿ ಎಂದು ಘೋಷಣೆ ಕೂಗಿದರು.
ಗ್ರಾ.ಪಂ.ಅಧ್ಯಕ್ಷ ಮಹೇಂದ್ರ ಮಾತನಾಡಿ, ಗ್ರಾಮದ ನಾಯಕರ ರಾಜಬೀದಿಯಲ್ಲಿ ರಸ್ತೆ, ಚರಂಡಿ ಹಾಳಾಗಿದ್ದು, ಗ್ರಾಮಸ್ಥರು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಇದು ಗ್ರಾಮದ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆಯನ್ನು ದುರಸ್ಥಿಪಡಿಸಿಕೊಡುವಂತೆ ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಮಾಜಿ ಶಾಸಕರಾದ ವಾಟಾಳ್ನಾಗರಾಜ್ ಅವರ ಅವಧಿಯಲ್ಲಿ ಈ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿತ್ತು. ಈಗ ಡಾಂಬರು ಕಿತ್ತುಹೋಗಿದ್ದು, ಜೆಲ್ಲಿಕಲ್ಲುಗಳು ಮೇಲಕ್ಕೆದ್ದು ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ನಮ್ಮ ಬೀದಿಯ ಅಭಿವೃದ್ದಿಯನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ಕಾಂಗ್ರೆಸ್, ಬಿಜೆಪಿ ಪಕ್ಷಗಳು ನಮ್ಮನ್ನು ಮತ ಬ್ಯಾಂಕ್ ಮಾಡಿಕೊಂಡಿದ್ದಾರೇ ಹೊರತು ನಮ್ಮ ಬೀದಿಯ ರಸ್ತೆ, ಚರಂಡಿ ನಿರ್ಮಾಣಕ್ಕೆ ಯಾವುದೇ ಅನುದಾನ ನೀಡಿಲ್ಲ. ತಕ್ಷಣದಲ್ಲೇ ಈ ರಸ್ತೆ ಅಭಿವೃದ್ದಿ ಪಡಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾ.ಪಂ.ಸದಸ್ಯರಾದ ಬಿ.ಮಾದೇಶ್, ಪುಟ್ಟಸ್ವಾಮಿ, ಮಲ್ಲೇಶ್, ಯಜಮಾನರಾದ ಶೇಷನಾಯಕ, ಕತ್ತಿನಾಯಕ, ವೀರಣ್ಣನಾಯಕ, ರಾಜಣ್ಣನಾಯಕ, ಮುಖಂಡರಾದ ಕೆಂಪನಾಯಕ, ಡಿ.ಸ್ವಾಮಿ, ಶೋಭ, ಭಾಗ್ಯಮ್ಮ, ರಾಜೇಶ್ವರಿ, ಪುಟ್ಟಸಿದ್ದಮ್ಮ, ಚಿಕ್ಕಮ್ಮ, ಮಹದೇವಮ್ಮ ಇತರರಿದ್ದರು.