ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ಮಿದುಳು ನಿಷ್ಕ್ರಿಯ; ಅಂಗಾಂಗ ದಾನ
ಮೈಸೂರು: ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯೊಬ್ಬರ ಅಂಗಾಂಗ ದಾನ ಮಾಡಿ ಏಳು ಜನರ ಪ್ರಾಣ ಉಳಿಸಲಾಗಿದೆ.
ಮಾಲತಿ ಅವರು ಪತಿಯೊಂದಿಗೆ ಡಿ.31ರಂದು ನಂಜನಗೂಡು ರಸ್ತೆಯ ಆರ್ಎಂಸಿ ಬಳಿ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಸ್ಕೂಟರ್ ಡಿಕ್ಕಿ ಹೊಡೆದು ಮಾಲತಿ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಮಾಲತಿ ಅವರ ಹೆಲ್ಮೆಟ್ ಧರಿಸಿದ್ದರು. ಲಾಕ್ ಆಗದ ಕಾರಣ ಹೆಲ್ಮೆಟ್ ಕಳಚಿ ತಲೆಗೆ ಪೆಟ್ಟು ಬಿದ್ದಿತ್ತು. ಇವರನ್ನು ನಿರ್ಮಲಾ ಆಸ್ಪತ್ರೆಯಿಂದ ಅಪೊಲೋ ಬಿಜಿಎಸ್ ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ಕರೆತರಲಾಯಿತು.
ಆರಂಭಿಕ ಸಿಟಿ ಸ್ಕ್ಯಾನ್ ನಿಂದ ಅವರ ಮೆದುಳು ಕಾಂಡವು ಊದಿಕೊಂಡಿರುವುದು ಪತ್ತೆಯಾಯಿತು. ತಕ್ಷಣ ಅವರನ್ನು ಜೀವ ರಕ್ಷಕ ವ್ಯವಸ್ಥೆ ಮತ್ತು ತುರ್ತು ಆರೈಕೆಗಾಗಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಯಿತು. ಐಸಿಯುನಲ್ಲಿ ಜೀವರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಗಿದ್ದ ಮಾಲತಿ ಅವರ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಜ.1ರಂದು ರಾತ್ರಿ 9.ಕ್ಕೆ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ತಜ್ಞವೈದ್ಯರ ತಂಡವು ಘೋಷಣೆ ಮಾಡಿತು.
ಪರೀಕ್ಷೆಗಳ ಮೂಲಕ ಅವರ ಅಂಗಾಂಗಗಳು ದಾನಕ್ಕೆ ಯೋಗ್ಯವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಯಿತು. ಶಿಷ್ಟಾಚಾರದಂತೆ ಕುಟುಂಬ ಸದಸ್ಯರಿಗೆ ಅಂಗಾಂಗ ದಾನದ ಕುರಿತು ಕೌನ್ಸೆಲಿಂಗ್ ನಡೆಸಲಾಯಿತು.ಅವರ ಕುಟುಂಬದವರು ಅಂಗಾಂಗ ದಾನಕ್ಕೆ ಸಮ್ಮತಿಸಿದರು.
ಜೀವ ಸಾರ್ಥಕತೆ ಅಧಿಕಾರಿಗಳು, ಅಂಗಾಂಗ ಕಸಿಗೆ ಕಾಯುತ್ತಿರುವ ರೋಗಿಗಳ ಪಟ್ಟಿ ಸಿದ್ಧಪಡಿಸಿದರು. ಸೋಮವಾರ ಬೆಳಿಗ್ಗೆ ೮.೩೦ರ ವೇಳೆಯಲ್ಲಿ ಮಾಲತಿ ಅವರ ಅಂಗಾಂಗಗಳನ್ನು (ಶ್ವಾಸಕೋಶಗಳು, ಎರಡು ಮೂತ್ರಪಿಂಡ, ಒಂದು ಯಕೃತ್ತು, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳು)ಬೇರ್ಪಡಿಸಲಾಯಿತು ಮತ್ತು ೯.೦೯ರ ಹೊತ್ತಿಗೆ ಮೈಸೂರಿನ ಅಪೊಲೋ ಬಿಜಿಎಸ್ ಹಾಸ್ಪಿಟಲ್ಸ್ನಲ್ಲಿ ಕ್ರಾಸ್ ಕ್ಲಾಂಪ್ ಪ್ರಕ್ರಿಯೆ ಮೂಲಕ ಅಂಗಾಂಗ ಕಸಿಯನ್ನು ಪೂರ್ಣಗೊಳಿಸಲಾಯಿತು. ಶ್ವಾಸಕೋಶಗಳನ್ನು ಸಿಕಂದರಾಬಾದ್ನ ಕಿಮ್ಸ್ ಗೆ ಏರ್ಲಿಫ್ಟ್ ಮಾಡಲಾಯಿತು. ಯಕೃತ್ತು ಹಾಗೂ ಎಡ ಮೂತ್ರಪಿಂಡವನ್ನು ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆಗೆ, ಬಲ ಮೂತ್ರಪಿಂಡವನ್ನು ಮೈಸೂರಿನ ಜಿಎಸ್ಎಸ್ ಆಸ್ಪತ್ರೆಗೆ, ಹೃದಯ ಕವಾಟಗಳನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ, ಕಾರ್ನಿಯಾಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಅಪೋಲೊ ಬಿಜಿಎಸ್ ಆಸ್ಪತ್ರೆಯ ಉಪಾಧ್ಯಕ್ಷ ಎನ್.ಜಿ.ಭರತೀಶ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





