ಮೈಸೂರು: ನಗರದ ಎಲೆ ತೋಟದ ರಾಜಕಾಲುವೆಯಲ್ಲಿ ಶನಿವಾರ ಮೊಸಳೆಯೊಂದು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಜೆಎಲ್ಬಿ ರಸ್ತೆಯ ಚಾಮುಂಡಿಪುರಂ ಸಮೀಪವಿರುವ ರಾಜಕಾಲುವೆಯಲ್ಲಿಮಧ್ಯಾಹ್ನದ ಹೊತ್ತಿಗೆ ಮೊಸಳೆ ಪತ್ತೆಯಾಯಿತು. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಮೊಸಳೆಯನ್ನು ನೋಡಲು ನೂರಾರು ಜನರು ಆಗಮಿಸಿದರು. ಆದರೆ ಪೊಲೀಸರು ಜನರನ್ನು ನಿಯಂತ್ರಿಸಿ ಮೊಸಳೆಯ ಹತ್ತಿರಕ್ಕೆ ಸಾಗದಂತೆ ತಡೆದರು.
ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ರಾಜಕಾಲುವೆಯಲ್ಲಿ ಹೆಚ್ಚಿನ ನೀರು ಹರಿಯುತ್ತಿದ್ದು, ಮೊಸಳೆ ಈ ನೀರಿನಲ್ಲಿ ಸಾಗಿ ಬಂದಿರಬೇಕೆಂದು ಶಂಕಿಸಲಾಗಿದೆ. ಮೊಸಳೆ ಸಾಧಾರಣ ಗಾತ್ರವಿದ್ದು ಐದರಿಂದ ಆರು ಅಡಿ ಉದ್ದವಿತ್ತು. ಇಲ್ಲಿಗೆ ಸಮೀಪದ ಸೀವೇಜ್ ಫಾರಂ ತ್ಯಾಜ್ಯ ವಿಲೇವಾರಿ ಘಟಕದ ಸಮೀಪ ಈ ಹಿಂದೆಯೂ ಮೊಸಳೆ ಪತ್ತೆಯಾಗಿತ್ತು. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಫಾರಂ ಸಮೀಪ ಭಾರಿ ಗಾತ್ರದ ಮೊಸಳೆಯೊಂದು ಪತ್ತೆಯಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬರುವಷ್ಟರಲ್ಲಿ ಅದು ಪೊದೆಗಳ ಮಧ್ಯೆ ಮರೆಯಾಗಿದ್ದರಿಂದ ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ.
ಎರಡು ವರ್ಷಗಳ ಹಿಂದೆಯೂ ಇಲ್ಲಿ ಮೊಸಳೆ ಪತ್ತೆಯಾಗಿತ್ತು. ಇದೀಗ ಪತ್ತೆಯಾಗಿರುವ ಮೊಸಳೆಯು ಇದೇ ಮೊಸಳೆ ಗುಂಪಿಗೆ ಸೇರಿದ್ದೆಂದು ಶಂಕಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು ಮೊಸಳೆಯನ್ನು ಸೆರೆ ಹಿಡಿಯುವ ಪ್ರಯತ್ನ ನಡೆಸಿದ್ದಾರೆ.