ನಂಜನಗೂಡು: ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾಡಿದ ಕಡೆಯಲ್ಲೆಲ್ಲಾ ಕಾಂಗ್ರೆಸ್ ನೆಲಕಚ್ಚಿದೆ. ಈಗ ಆ ಸರದಿ ಕರ್ನಾಟಕ ಕಾಂಗ್ರೆಸ್ನದ್ದಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಲೇವಡಿ ಮಾಡಿದರು.
ನಗರದ ಶ್ರೀಕಂಠೇಶ್ವರಸ್ವಾಮಿ ದೇಗುಲಕ್ಕೆ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಇಂದಿನಿಂದ ರಾಜ್ಯ ಪ್ರವಾಸ ಮಾಡುತ್ತಿರುವುದು ನೋಡಿದರೆ ಅವರು ಎಲ್ಲೆಲ್ಲಿ ಹೋಗುತ್ತಾರೋ ಅಲ್ಲಲ್ಲಿ ಕಾಂಗ್ರೆಸ್ ಸೋಲುವುದು ನಿಶ್ಚಿತವಾಗಿದೆ. ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ವಿರೋಧ ಪಕ್ಷದ ಸ್ತಾನದಲ್ಲಿದೆ ಇದೀಗ ರಾಹುಲ್ ಗಾಂಧಿ ಪಾದಯಾತ್ರೆಯಿಂದಾಗಿ ಮುಂದೆ ಅಷ್ಟು ಸ್ಥಾನಗಳು ಕಾಂಗ್ರೆಸ್ ಪಾಲಿಗೆ ಇಲ್ಲವಾಗುತ್ತದೆ ಎಂದು ಅವರು ವ್ಯಂಗ್ಯವಾಡಿದರು.
ಕಾಂಗ್ರೆಸ್ ನವರು ಭಾರತವನ್ನು ಒಗ್ಗೂಡಿಸುವ ಕೆಲಸವನ್ನು ಯಾವತ್ತೂ ಮಾಡಿಲ್ಲ.
ದೇಶ ಒಡೆದವರೇ ಅವರು. ದೇಶವನ್ನು ಒಡೆಯುವುದೇ ಇವರ ಕೆಲಸವಾಗಿದೆ.
ಅದಕ್ಕಾಗಿ ಅವರು ಆ ಕಾಲದಿಂದಲೂ ತುಕ್ಡೆ ತುಕ್ಡೆ ಗ್ಯಾಂಗ್ಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ೩೨ ಸಾವಿರ ಚ.ಕಿ.ಮೀ. ಭಾರತದ ಗಡಿಭಾಗ ಚೀನಾ ದೇಶಕ್ಕೆ ಬಿಟ್ಟುಕೊಟ್ಟಿದ್ದು ಯಾರು? ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ಗೆದ್ದರೂ ಸಂಪೂರ್ಣವಾಗಿ ಕಾಶ್ಮೀರವನ್ನು ವಶಕ್ಕೆ ಪಡೆಯುದೇ ಸಮಸ್ಯೆ ಜೀವಂತವಾಗಿರಿಸಿದವರು ಕಾಂಗ್ರೆಸ್ ನವರಲ್ಲವೆ ಎಂದು ಪ್ರಶ್ನಿಸಿದರು.
ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ಇಟ್ಟುಕೊಂಡು ಕೇಂದ್ರ ಸರ್ಕಾರ ಪಿಎಫ್ಐ ಸೇರಿದಂತೆ ೮ ಸಂಘಟನೆಗಳನ್ನು ನಿಷೇಧ ಹೇರುವ ದಿಟ್ಟ ಕ್ರಮ ಕೈಗೊಂಡಿದೆ. ಇಂತಹ ಸಂದರ್ಭದಲ್ಲಿ ಎಸ್ಡಿಪಿಐ ನಾಯಕರು ಡಿ.ಕೆ.ಶಿವಕುಮಾರ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಮಾಡಿರುವುದನ್ನು ಎಸ್ಡಿಪಿಐ ಖಂಡಿಸದಿರುವುದೇ ಅವರ ಈ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದರು.
ದೇಶಪ್ರೇಮ ಹಾಗೂ ದೇಶಭಕ್ತಿಯನ್ನು ಬಿತ್ತುವಲ್ಲಿ ಆರ್ಎಸ್ಎಸ್ ಅಹರ್ನಿಶಿ ಸೇವೆ ಸಲ್ಲಿಸುತ್ತಿದೆ. ಇಂತಹ ಸ್ವಯಂಸೇವಾ ಸಂಸ್ಥೆ ಜತೆಗೆ ಪಿಎಫ್ಐ ಸಂಘಟನೆಯನ್ನು ಹೋಲಿಕೆ ಮಾಡಿ ಅದನ್ನು ಬ್ಯಾನ್ ಮಾಡಿ ಎಂದು ಹೇಳಿರುವ ಸಿದ್ದರಾಮಯ್ಯ ಹೇಳಿಕೆ ಬಾಲಿಶವಾದದು. ಇಂತಹವರಿಗೆ ಈಗಾಗಲೇ ಜನ ಪಾಠ ಕಲಿಸಿದ್ದಾರೆ. ಮುಂದೆಯೂ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
.