Mysore
14
few clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಚೆಸ್ ನಲ್ಲಿ ಚಾ.ನಗರದ ಬಾಲಕಿಯರು ರಾಷ್ಟ್ರ ಮಟ್ಟಕ್ಕೆ

ಸಹೋದರಿಯರು ಸೇರಿ ಐವರು ಆಯ್ಕೆ

ಚಾಮರಾಜನಗರ: ನಗರದ ಸೇವಾಭಾರತಿ ಪಬ್ಲಿಕ್ ಶಾಲೆಯ ಐವರು ಬಾಲಕಿಯರು ಚದುರಂಗ ಸ್ಪರ್ಧೆ ಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆಕರ್ಷ ಕಿಶೋರ, ಆದರ್ಶ ಕಿಶೋರ, ದೀಪಾಶ್ರೀ , ಪ್ರಜ್ಞಾ , ಧೃತಿ ಅವರು ಉಡುಪಿ ಜಿಲ್ಲೆಯಲ್ಲಿ ನಡೆದ ಪ್ರಾಂತ ಹಾಗೂ ಕ್ಷೇತ್ರೀಯ ಮಟ್ಟದ ಸ್ಪರ್ಧೆ ಯಲ್ಲಿ ಜಯಿಸಿ ರಾಷ್ಟ್ರ ಮಟ್ಟಕ್ಕೆ ಅರ್ಹತೆ ಪಡೆದವರು.
ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಹಾಗೂ ವಿದ್ಯಾ ಭಾರತಿ ಕರ್ನಾಟಕ ವತಿಯಿಂದ ಆಯೋಜಿಸಲಾಗಿದ್ದ ಪ್ರೌಢಶಾಲಾ ಮಟ್ಟದ ಬಾಲಕಿಯರ ವಿಭಾಗದಲ್ಲಿ ಮೂರು ಸುತ್ತಿನ ಸ್ಪರ್ಧೆಯಲ್ಲಿ ಸೆಣಸಿ ಅಂತಿಮವಾಗಿ ಉಡುಪಿ ಜಿಲ್ಲಾ ತಂಡದ ವಿರುದ್ಧ ಗೆದ್ದಿದ್ದಾರೆ.
ದಕ್ಷಿಣ ಕನ್ನಡ, ಬೆಂಗಳೂರು, ಉಡುಪಿ, ಚಾಮರಾಜನಗರ ಜಿಲ್ಲೆಗಳ ಬಾಲಕಿಯರು ಉಡುಪಿಯ ಹೆಬ್ರಿ ಯಲ್ಲಿ ನಡೆದ ಈ ಪಂದ್ಯಾವಳಿ ಯಲ್ಲಿ ಭಾಗವಹಿಸಿದ್ದರು.
ವಿಜೇತರಾದ ಚಾ.ನಗರದ ಬಾಲಕಿಯರಿಗೆ ಚಿನ್ನದಪದಕ, ಪ್ರಮಾಣಪತ್ರವನ್ನು ಬುಧವಾರ (ನ.2) ಪ್ರದಾನ ಮಾಡಲಾಗಿದೆಯಲ್ಲದೇ ಈ ತಂಡಕ್ಕೆ ಟ್ರೋಫಿ ನೀಡಲಾಗಿದೆ.
ನಗರದ ಚನ್ನೀಪುರಮೋಳೆಯ ಸೇವಾ ಭಾರತಿ ಪಬ್ಲಿಕ್
ಶಾಲೆಯ ಮುಖ್ಯ ಶಿಕ್ಷಕಿ ರಾಧಿಕಾಗುಪ್ತ, ದೈಹಿಕ ಶಿಕ್ಷಣ ಶಿಕ್ಷಕರಾದ ರೇಖಾ, ಬಾಲಕೃಷ್ಣ, ಚೆಸ್ ಕೋಚ್ ಕಿಶೋರ್ ಕುಮಾರ್ ಮತ್ತು ಶಾಲಾ ಆಡಳಿತ ಮಂಡಳಿಯವರು ಬಾಲಕಿಯರಿಗೆ
ಅಭಿನಂದನೆ ಸಲ್ಲಿಸಿ ಸಾಧನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆ ಅಸ್ಸಾಂನಲ್ಲಿ ನಡೆಯಲಿದೆ ಎನ್ನಲಾಗಿದ್ದು ಅಲ್ಲಿಗೆ ಅರ್ಹತೆ ಪಡೆದಿರುವ ಈ ಐವರು ಬಾಲಕಿಯರ ಪೈಕಿ ಆದರ್ಶ ಕಿಶೋರ ಮತ್ತು ಆಕರ್ಷ ಕಿಶೋರ ಅಕ್ಕ-ತಂಗಿಯರು. ಕ್ರಮವಾಗಿ 10 ಮತ್ತು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇವರು ಇಲ್ಲಿನ ವಾದಿರಾಜ ನಗರದ ಕಿಶೋರ್ ಕುಮಾರ್ ಮತ್ತು ಸರಳ
ದಂಪತಿ ಪುತ್ರಿಯರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!