ಚಾಮರಾಜನಗರ: ಕಾಡಾನೆಯೊಂದು ಆನೆ ಕಾರ್ಯಪಡೆ ಸಿಬ್ಬಂದಿ ಮೇಲೆ ದಾಳಿ ಮಾಡಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಧಾಮದ ಪಿಜಿ ಪಾಳ್ಯ ವನ್ಯ ಜೀವಿ ವಲಯದಲ್ಲಿ ಗುರುವಾರ (ಜೂನ್.೨೦) ತಡರಾತ್ರಿ ನಡೆದಿದೆ.
ಮುನಿಯಪ್ಪ, ನಾಗರಾಜು ಮತ್ತು ಜಡೇಸ್ವಾಮಿ ಕಾಡಾನೆಯಿಂದ ದಾಳಿಗೆ ಒಳಗಾದವರಾಗಿದ್ದಾರೆ.
ಆನೆ ಕಾರ್ಯಪಡೆ ಸಿಬ್ಬಂದಿ ರಾತ್ರಿ ಸಮಯದಲ್ಲಿ ಗಸ್ತಿಗೆ ಹೋಗಿದ್ದ ಸಮಯದಲ್ಲಿ ಗುಂಡಿಮಾಳದ ಮುಖ್ಯ ರಸ್ತೆಯ ಬಳಿ ಆನೆ ಗ್ರಾಮಕ್ಕೆ ನುಗ್ಗುತ್ತಿರುವುದನ್ನು ನೋಡಿದ್ದಾರೆ. ಆನೆಯನ್ನು ತಡೆಯಲು ಮುಂದಾದ ವೇಳೆ ಕಾಡಾನೆ ಏಕಾಏಕಿ ಅವರ ಮೇಲೆ ದಾಳಿ ಮಾಡಿದೆ.
ದಾಳಿಯಿಂದ ಮುನಿಯಪ್ಪಗೆ ತಲೆ ಮೇಲೆ, ನಾಗರಾಜು ಅವರಿಗೆ ಎಡಗೈಗೆ ಹಾಗೂ ಜಡೇಸ್ವಾಮಿಗೆ ಕಾಲಿಗೆ ಪೆಟ್ಟಾಗಿದ್ದು, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.





