ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು
ಗುಂಡ್ಲುಪೇಟೆ: ಯುಗಾದಿ ಎಂದರೆ ಭಾರತೀಯರಿಗೆ ಹಿಂದೂ ಸಂಪ್ರದಾಯದಂತೆ ಹೊಸವರ್ಷ ಎಂಬುದು ಪ್ರತೀತಿ ಯುಗಾದಿಯ ದಿನ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ದೆವಸ್ಥಾನದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಅದೇ ರೀತಿ ತಾಲ್ಲೂಕಿನಾದ್ಯಂತ ಎಲ್ಲಾ ಗ್ರಾಮದಲ್ಲಿಯೂ ಸಂಭ್ರಮದಿಂದ ಯುಗಾದಿ ಆಚರಣೆ ಮಾಡಿದರೆ ಹಂಗಳ ಮತ್ತು ದೇವರಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ.
ಹಂಗಳ ಗ್ರಾಮದಲ್ಲಿ ಬೆಳಿಗ್ಗೆ ಎಂಟು ಗಂಟೆಗೆ ಗ್ರಾಮದ ಹನ್ನೆರಡು ಮನೆತನವು ಸಂಪ್ರದಾಯದಂತೆ ಹೊನ್ನೇರು ಕಟ್ಟಿ ಸಂಭ್ರಮಿಸಿತು. ನಂತರ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನೂರಾರು ವರ್ಷದಿಂದ ಎತ್ತಿನ ಹಬ್ಬ ಮಾಡುತ್ತಿದ್ದು, ಇದನ್ನು ನೋಡಲು ವಿವಿಧ ಗ್ರಾಮಗಳಿಂದ ನೂರಾರು ಜನರು ಅಗಮಿಸಿ ಎತ್ತಿನಹಬ್ಬ ಕಣ್ತುಂಬಿಕೊಂಡರು.
ಎತ್ತುಗಳಿಗೆ ಅರೋಗ್ಯ ಸಮಸ್ಯೆ ಇದ್ದರೆ ಗುಣವಾಗಲಿ ಎಂದು ಹರಕೆ ಹೊತ್ತು ಎತ್ತಿಗೆ ಹಗ್ಗ ಕಟ್ಟಿ ಓಡಲು ಬಿಡುತ್ತಾರೆ. ಯುವಕರು ಎತ್ತನ್ನು ಹಿಡಿದು ಕಟ್ಟಿಹಾಕಲು ಯತ್ನಿಸುವ ಹಬ್ಬವೇ ಎತ್ತಿನ ಹಬ್ಬ. ಇದನ್ನು ನೋಡಲುಗ್ರಾಮದ ದೇವಸ್ಥಾನ, ಜಗಲಿಕಟ್ಟೆ, ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ತಾಲ್ಲೂಕಿನ ಮಾಡ್ರಹಳ್ಳಿ, ನೇನೆಕಟ್ಟೆ, ಮಳವಳ್ಳಿ, ವೀರನಪುರ, ಬನ್ನಿತಾಳಪುರ, ಇಂಗಲವಾಡಿ ಗ್ರಾಮದಲ್ಲಿ ಬುಧವಾರ ಹಬ್ಬ ಬಿದ್ದಾಗ ಮಾತ್ರ ಆಚರಣೆ ಮಾಡುತ್ತಾರೆ. ಬೇರೆ ದಿನ ಹಬ್ಬ ಬಿದ್ದರೆ ಅಚರಣೆ ಮಾಡುವುದಿಲ್ಲ, ಮುಂದಿನ ಬುಧವಾರವೇ ಯುಗಾದಿ ಅಚರಿಸಲಾಗುವುದು. ಕಳೆದ ವರ್ಷ ಬುಧವಾರವೇ ಹಬ್ಬ ಬಿದ್ದ ಕಾರಣ ಅಚರಣೆ ಮಾಡಿದ್ದರು. ಅದರೆ ಈ ವರ್ಷ ಗುರುವಾರ ಬಿದ್ದ ಕಾರಣ ಮುಂದಿನ ಬುಧವಾರಕ್ಕೆ ಹಬ್ಬ ಆಚರಣೆ ಮಾಡಲಾಗುತ್ತದೆ.




