ಹನೂರು: ತಾಯಿ ಹುಲಿ ಮತ್ತು ನಾಲ್ಕು ಹುಲಿ ಮರಿಗಳನ್ನು ಸಂರಕ್ಷಣೆ ಮಾಡುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿ ಸಿ ಎಫ್ ಚಕ್ರಪಾಣಿ, ಎಸಿಎಫ್ ಗಜಾನನ ಹೆಗಡೆ, ವಲಯ ಅರಣ್ಯಾಧಿಕಾರಿ ಮಾದೇಶ್ ರವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಸರ್ಕಾರ ಆದೇಶ ಹೊರಡಿಸಿದೆ.
ತಾಯಿ ಮತ್ತು ನಾಲ್ಕು ಹುಲಿ ಮರಿಗಳು ರಸ್ತೆಯ 100 ಮೀಟರ್ ದೂರದಲ್ಲಿ ಸತ್ತು ಬಿದ್ದಿದ್ದರೂ ಎರಡು ದಿನಗಳವರೆಗೆ ಇಲಾಖೆಯ ಸಿಬ್ಬಂದಿಯ ಗಮನಕ್ಕೆ ಬಾರದಿರುವುದು, ಅರಣ್ಯ ವನ್ಯಜೀವಿ ಸಂರಕ್ಷಣೆಯಲ್ಲಿ ಲೋಪವಾಗಿರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಸಾವಿಗೀಡಾದ ಸ್ಥಳದಿಂದ ಕೇವಲ 800 ಮೀಟರ್ ದೂರದಲ್ಲಿ ಕಳ್ಳ ಬೇಟೆ ನಿಗ್ರಹ ಶಿಬಿರವಿದ್ದರೂ ವನ್ಯಜೀವಿ ರಕ್ಷಣೆಯಾಗದಿರುವುದು, ಕಳೆದ ಮೂರು ತಿಂಗಳಿನಿಂದ ಮುಂಚೂಣಿಯ ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಭತ್ಯೆ ನೀಡದೇ ಇರುವುದು, ಗಸ್ತು ಕಾರ್ಯಕ್ಕೆ ಅಡಚಣೆ ಉಂಟಾಗಿದೆ. ಇದಕ್ಕೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಲಯ ಅರಣ್ಯಾಧಿಕಾರಿ,ಉಪ ವಲಯ ಅರಣ್ಯಾಧಿಕಾರಿ, ಗಸ್ತು ಸಿಬ್ಬಂದಿಯ ಕರ್ತವ್ಯ ಲೋಪವೇ ಕಾರಣ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದ ವರೆಗೆ ಕಡ್ಡಾಯ ರಜೆಯ ಮೇಲೆ ಕಳುಹಿಸಲು ನಿರ್ದೇಶಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಉಳಿದಂತೆ ಉಪವಲಯ ಅರಣ್ಯಾಧಿಕಾರಿ ಮತ್ತು ಗಸ್ತು ಸಿಬ್ಬಂದಿಗಳ ಸಂಬಂಧ ಕ್ರಮವನ್ನು ಪ್ರತ್ಯೇಕವಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಾಮರಾಜನಗರ ವೃತ್ತ ರವರ ಹಂತದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪಸಂರಕ್ಷಣಾಧಿಕಾರಿಯಾಗಿದ್ದ ಚಕ್ರಪಾಣಿ ರವರ ಹುದ್ದೆಗೆ ಈ ಹಿಂದೆ ಡಿಸಿಎಫ್ ಆಗಿದ್ದ ಸಂತೋಷ್ ಕುಮಾರ್ ರವರಿಗೆ ಹೆಚ್ಚುವರಿ ಪ್ರಭಾರ ವಹಿಸಲಾಗಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಗಜಾನನ ಹೆಗಡೆಯ ಬದಲಾಗಿ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಉಪ ವಿಭಾಗದ ಸ್ವಪ್ಟಿಲ್ ಮನೋಹರ್ ಅಹಿರೆ ರವರಿಗೆ ಹೆಚ್ಚುವರಿ ಪ್ರಭಾರ ಹುದ್ದೆ ನೀಡಲಾಗಿದೆ.
ವಲಯ ಅರಣ್ಯಾಧಿಕಾರಿ ಮಾದೇಶ್ ರವರ ಸ್ಥಳಕ್ಕೆ ಪ್ರೊಫೆಷನರಿ ಎಸಿಎಫ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಉಮಾಪತಿ ರವರನ್ನು ಹೂಗ್ಯಂ ವನ್ಯಜೀವಿ ವಲಯ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅರಣ್ಯಪಡೆಯ ಮುಖ್ಯಸ್ಥರು ಆದೇಶ ಹೊರಡಿಸಿದ್ದಾರೆ.





