Mysore
27
few clouds

Social Media

ಸೋಮವಾರ, 02 ಫೆಬ್ರವರಿ 2026
Light
Dark

ಕಾರ್ಯಕರ್ತರ ಪ್ರೀತಿ-ವಿಶ್ವಾಸವೇ ನನಗೆ ಶ್ರೀರಕ್ಷೆ : ಆರ್.ನರೇಂದ್ರ

R Narendra

ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಅಭಿಪ್ರಾಯ

ಹನೂರು: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಸರಳವಾಗಿ ಆಚರಿಸಿದರು.

ಈ ವೇಳೆ ಸನ್ಮಾನ ಸ್ವೀಕರಿಸಿದ ಬಳಿಕ ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ನಾನು ಇದುವರೆಗೂ ಆಡಂಬರದ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿಲ್ಲ. ಪಕ್ಷದ ಅಭಿಮಾನಿಗಳು , ಕಾರ್ಯಕರ್ತರ ಪ್ರೀತಿ-ವಿಶ್ವಾಸ, ಶುಭ ಹಾರೈಕೆಯೇ ನನಗೆ ಶ್ರೀರಕ್ಷೆಯಾಗಿದೆ ಎಂದರು.

ಹನೂರು ಕ್ಷೇತ್ರದ ಜನರು ನಮ್ಮ ಕುಟುಂಬಕ್ಕೆ ೬೦ ವರ್ಷಗಳ ಕಾಲ ಅಧಿಕಾರ ನೀಡಿ ಅವರ ಸೇವೆಯನ್ನು ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ನಾನು ಕೂಡ ನಮ್ಮ ತಂದೆ ಹಾಗೂ ದೊಡ್ಡಪ್ಪನವರ ಹಾದಿಯಲ್ಲಿಯೇ ಕ್ಷೇತ್ರದ ಜನರ ಸೇವೆ ಮುಂದುವರಿಸಿಕೊಂಡು ಬಂದಿದ್ದೇನೆ. ಮೂರು ಅವಧಿಯಲ್ಲಿ ಶಾಸಕನಾಗಿ, ನಿಗಮ ಮಂಡಳಿ ಅಧ್ಯಕ್ಷನಾಗಿ ಸಾವಿರಾರು ಕೋಟಿ ರೂ. ಅನುದಾನ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಕೆ-ಶಿಪ್ ರಸ್ತೆ, ವಸತಿ ಶಾಲೆಗಳು, ಆಸ್ಪತ್ರೆಗಳು ಇನ್ನಿತರ ಕೆಲಸ ಕಾರ್ಯಗಳು ಇತಿಹಾಸ ಪುಟಗಳಲ್ಲಿ ಸೇರುವಂತೆ ಮಾಡಿರುವುದು ಸಂತಸದ ವಿಚಾರ ಎಂದರು.

ಕ್ಷೇತ್ರದ ಜನರ ಸೇವೆಗಾಗಿಯೇ ನನ್ನ ಸಮಯವನ್ನು ಮೀಸಲಿಟ್ಟಿದ್ದೇನೆ. ಕ್ಷೇತ್ರದ ಜನತೆ ನನ್ನನ್ನು ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡುವ ಮೂಲಕ ಜೀವನದಲ್ಲಿ ಮರೆಯದ ಕ್ಷಣಗಳನ್ನು ತಂದು ಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸದಿಂದ ಸೋಲುಂಟಾಗಿದೆ. ಆದರೂ ಕ್ಷೇತ್ರದ ಜನರು ಲೋಕಸಭಾ ಚುನಾವಣೆಯಲ್ಲಿ ಆ ನೋವನ್ನು ಮರೆಸಿದ್ದಾರೆ. ಹನೂರು ಪ್ರಾಥಮಿಕ ಕೃಷಿ ಪರಿಷತ್ತಿನ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹಾಗೂ ನನ್ನನ್ನು ಆಯ್ಕೆ ಮಾಡಲು ಹಗಲಿರುಳು ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶಕ್ತಿ ತುಂಬಿದ್ದಾರೆ. ನಿಮ್ಮ ಅಭಿಮಾನ, ವಿಶ್ವಾಸಕ್ಕೆ ಸದಾ ಋಣಿಯಾಗಿರುತ್ತೇನೆ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಗಿರೀಶ್, ಹರೀಶ್, ನವೀನ್ ಸೋಮಶೇಖರ್, ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಸಿ.ಮಾದೇಶ್, ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಾದೇಶ್, ರಾಮಾಪುರ ಬ್ಲಾಕ್ ಕಾಂಗ್ರೆಸ್ ಯೂಥ್ ಅಧ್ಯಕ್ಷ ರಮೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ರಾಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸಿದ್ದರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಶೋಕ್, ರಾಮಾಪುರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಾಮಲಿಂಗಂ, ಹನೂರು ಪಿಎಸಿಸಿ ಅಧ್ಯಕ್ಷ ಅನಿಲ್ ಕುಮಾರ್, ಮುಖಂಡರಾದ ಮಾದೇಶ್, ಸೋಮಶೇಖರ್, ಎಲ್.ನಾಗೇಂದ್ರ, ಪ್ರವೀಣ್ ಕುಮಾರ್, ವಾಜಿದ್ ಖಾನ್, ಶಿವಕುಮಾರ್, ರಾಜು, ಆಟೋ ರಾಜೇಶ್, ಮಲ್ಲೇಶ್, ಎಲ್. ರಾಜೇಂದ್ರ ಹಾಜರಿದ್ದರು.

Tags:
error: Content is protected !!