ಹನೂರು: ಲಂಬಾಣಿ ಸಮುದಾಯವೂ ಬಡತನ ರೇಖೆಗಿಂತ ಕೆಳಗಿರುವ ಸಣ್ಣ ಸಮುದಾಯವಾಗಿದ್ದು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಹನೂರು ಪಟ್ಟಣದಲ್ಲಿ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತಾಲ್ಲೂಕಿನ ವಿವಿಧ ಸಮುದಾಯದವರು ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಬಂಜಾರ ಸೇವಾ ಸಂಘದ ಗೌರವಾಧ್ಯಕ್ಷ ಶಾಂತರಾಜು ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಂಜಾರ ಸಮುದಾಯವು ರಾಜ್ಯದಲ್ಲಿಯೇ ಒಂದು ಸಣ್ಣ ಸಮುದಾಯವಾಗಿದೆ. ನಮ್ಮ ಸಮಾಜಕ್ಕೆ ಇದುವರೆಗೂ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಇನ್ನು ಸಮರ್ಪಕವಾಗಿ ಸಿಗದೇ ನಮ್ಮ ಜನರು ತುತ್ತು ಅನ್ನಕ್ಕಾಗಿ ಜಿಲ್ಲೆಯಿಂದ ಜಿಲ್ಲೆಗೆ ವಲಸೆ ಹೋಗುವಂತಹ ಪರಿಸ್ಥಿತಿ ಬಂದಿದೆ. ಕೂಲಿಗಾಗಿ ಹೋದ ಸಂದರ್ಭದಲ್ಲಿ ಮಕ್ಕಳು ಹಲವಾರು ಕಾರಣಗಳಿಂದ ಮೃತಪಟ್ಟಿದ್ದಾರೆ. ನಮ್ಮ ಸಮಾಜದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಾಗೂ ಸರ್ಕಾರದಿಂದ ಸಿಗಬೇಕಾದ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ವಿಭಾಗೀಯ ಮಟ್ಟದ ಬಂಜಾರ ಮಳಾವೋ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಸೇವಾಲಾಲ್ ಮಹಾರಾಜರು ಕೇವಲ ಲಂಬಾಣಿ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ, ಇವರು ಆದರ್ಶ ಪುರುಷರು ಇಂತಹ ಮಹನೀಯರ ಜಯಂತಿ ಕಾರ್ಯಕ್ರಮವನ್ನು ಸರ್ವಧರ್ಮೀಯರು ಆಚರಣೆ ಮಾಡುವ ಮೂಲಕ ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹನೂರು ತಾಲೂಕು ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ನಮ್ಮ ಸಮುದಾಯದವರು ಬೆಂಬಲ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಈ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಆಗಮಿಸಲಿದ್ದು, ಕ್ಷೇತ್ರದ ಸರ್ವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಹನೂರು ಪಟ್ಟಣದಲ್ಲಿ ಮೊಟ್ಟ ಮೊದಲ ಬಾರಿಗೆ ವಿಭಾಗಿಯ ಮಟ್ಟದ 287ನೇ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಫೆಬ್ರವರಿ.28ರಂದು ಮಲೆ ಮಹದೇಶ್ವರ ಕ್ರೀಡಾಕಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9 ಗಂಟೆಗೆ ಆರ್ ಎಂ ಸಿ ಮೈದಾನದಿಂದ ಬಂಜಾರ ಕಲಾತಂಡಗಳ ಉದ್ಘಾಟನೆ ಹಾಗೂ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 10 ಗಂಟೆಗೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ, ಸಂಸದ ಸುನಿಲ್ ಬೋಸ್, ಶಾಸಕರಾದ ಎಂಆರ್ ಮಂಜುನಾಥ್, ಪುಟ್ಟರಂಗಶೆಟ್ಟಿ, ಎ.ಆರ್ ಕೃಷ್ಣಮೂರ್ತಿ, ನರೇಂದ್ರಸ್ವಾಮಿ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಮಾಜಿ ಶಾಸಕರುಗಳಾದ ಆರ್ ನರೇಂದ್ರ, ಎನ್ ಮಹೇಶ್, ಜಿಎನ್ ನಂಜುಂಡಸ್ವಾಮಿ, ಪರಿಮಳ ನಾಗಪ್ಪ, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದತ್ತೇಶ್ ಕುಮಾರ್, ಸಮಾಜ ಸೇವಕರಾದ ನಿಶಾಂತ್, ವೆಂಕಟೇಶ್, ತಹಸೀಲ್ದಾರ್ ಚೈತ್ರ, ಸಮುದಾಯದ ಜನಪ್ರತಿನಿಧಿಗಳುಸೇರಿದಂತೆ ಇನ್ನಿತರ ಪ್ರಮುಖ ಗಣ್ಯರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಕುಮಾರ್ ನಾಯಕ್, ಬಂಜಾರ ಸಂಘದ ಅಧ್ಯಕ್ಷ ಶಿವಾಜಿನಾಯಕ್, ಸಮುದಾಯದ ಮುಖಂಡರಾದ ಮುನಿನಾಯಕ್, ಗೋಪಾಲನಾಯ್ಕ, ಮಹಾದೇವನಾಯ್ಕ, ಗುರು, ನಾಗರಾಜು, ನಾಗೇಶ್ ಹಾಜರಿದ್ದರು.





