ಬಂಡೀಪುರ, ನಾಗರಹೊಳೆ: ನಾಗರಹೊಳೆ ಬಂಡೀಪುರದಲ್ಲಿ ಸಫಾರಿ ಪುನರಾರಂಭವಾದ ಸಂತೋಷ ಒಂದೆಡೆಯಾದರೆ, ಸಫಾರಿ ವೇಳೆ ಮೊಬೈಲ್ ಬಳಕೆಗೆ ನಿಷೇಧವೇರಿರುವುದು ಕೆಲ ಸಫಾರಿ ಪ್ರಿಯರಿಗೆ ಬೇಸರ ಮೂಡಿಸಿದೆ.
ಛಾಯಾಗ್ರಾಹಕರು ಬಳಸುವ ದುಬಾರಿ ಕ್ಯಾಮೆರಾಗಳನ್ನು ನಾವು ಬಳಸುದಿಲ್ಲ. ಕ್ಯಾಮೆರಾಗೆ ದುಬಾರಿ ಶುಲ್ಕ ಪಾವತಿಸಲೂ ಸಾಧ್ಯವಿಲ್ಲ. ನಾವು ಯಾವಾಗಲೋ ವರ್ಷಕ್ಕೆ ಒಮ್ಮೆ ಸಫಾರಿ ಬರುವವರು.ಹೀಗಾಗಿ ಮೊಬೈಲ್ನಲ್ಲಿಯೇ ಸಫಾರಿ ವೇಳೆ ಕಾಣುವ ಪ್ರಕೃತಿ ಸೌಂದರ್ಯ, ವನ್ಯಜೀವಿಗಳ ಚಿತ್ರಗಳನ್ನು ಸೆರೆ ಹಿಡಿದು, ಕುಟುಂಬಸ್ಥರೊಂದಿಗೆ ಹಂಚಿಕೊಳ್ಳುತ್ತಿದ್ದೆವು. ಈಗ ಆ ಅವಕಾಶ ತಪ್ಪಿದೆ ಎಂಬುದು ಸಫಾರಿ ಪ್ರಿಯರ ಬೇಸರವಾಗಿದೆ.
ಇನ್ನು ಸುಪ್ರೀಂಕೋರ್ಟ್ ಈ ಹಿಂದೆಯೇ ಆದೇಶ ಮಾಡಿದಂತೆ ಮೊಬೈಲ್ ನಿಷೇಧ ಮಾಡಿರುವುದರಿಂದ ಸಫಾರಿ ವೇಳೆ ಆಗುತ್ತಿದ್ದ ಕಿರಿಕಿರಿ ತಪ್ಪಿದೆ. ವನ್ಯಜೀವಿಗಳನ್ನು ನಿಶಬ್ದದಿಂದ ನೋಡಬೇಕು. ಆದರೆ ಕೆಲ ಕೆಲವರ ಮೊಬೈಲ್ ರಿಂಗ್ ಆಗುತ್ತಿತ್ತು. ಕೆಲವರು ಮೊಬೈಲ್ ಕ್ಯಾಮೆರಾ ಹಿಡಿದು ಕಿರಿ ಕಿರಿ ಮಾಡುತ್ತಿದ್ದರು. ಹೀಗಾಗಿ ಮೊಬೈಲ್ ನಿಷೇಧ ಸ್ವಾಗತಾರ್ಹ ಎಂಬುದು ಹಲವರ ಅಭಿಪ್ರಾಯವಾಗಿದೆ.




