ಚಾಮರಾಜನಗರ: ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರತಿವರ್ಷ ನಡೆಸುವ ಸಾಮೂಹಿಕ ವಿವಾಹವನ್ನು ಈ ವರ್ಷ ಆ.21ರಂದು ನಡಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ನೇತೃತ್ವದ ಸಭೆಯಲ್ಲಿ ಚರ್ಚಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಸಭೆ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಉಸ್ತುವಾರಿ ಸಚಿವ ವೆಂಕಟೇಶ್ ವಹಿಸಿದ್ದರು.
ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮಾಸ್ಟರಿಂಗ್ ಪ್ಲಾನ್ಗೆ ಸೇರಿದಂತೆ ನೂತನ ಕಟ್ಟಡಗಳ ನಿರ್ಮಾಣ, ಮೂಲ ಸೌಕರ್ಯಗಳ ಕೊರೆತೆ ನೀಗಿಸುವುದು, ಮುಡಿ ಕಾಣಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ಜತೆಗೆ ಲಾಡು ಪ್ರಸಾದ ವಿತರಣೆ, ಪೂಜಾ ಸಾಮಾಗ್ರಿಗಳ ಸರಬರಾಜು, ವಾಹನ ಶುಲ್ಕ, ವಾಹನ ತಪಾಸಣೆ, ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿಸುವ ಕುರಿತು ತೆಗೆದುಕೊಳ್ಳಬಹುದಾದ ಮುಂದಿನ ನಡೆ ಬಗ್ಗೆ ಪ್ರಸ್ತಾಪಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಕೆ. ವೆಂಕಟೇಶ್ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೂ ಮೊದಲೇ 512 ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರಾದ ಎ.ಆರ್ ಕೃಷ್ಣಮೂರ್ತಿ, ಪುಟ್ಟರಂಗ ಶೆಟ್ಟಿ, ಎಚ್.ಎಸ್ ಗಣೇಶ್ ಪ್ರಸಾದ್, ಎಂ.ಆರ್ ಮಂಜುನಾಥ್, ಸಾಲೂರು ಮಠದ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾಧಿಕಾರಿ ಶಿಲ್ಪನಾಗ್, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಸೇರಿದಂತೆ ಹಲವರು ಹಾಜರಿದ್ದರು.