Mysore
30
clear sky

Social Media

ಶನಿವಾರ, 07 ಫೆಬ್ರವರಿ 2026
Light
Dark

ಪರವಾನಗಿ ಅಮಾನತ್ತು : ನಾಲ್ವರ ವಿರುದ್ಧ ಶಿಸ್ತು ಕ್ರಮ

ಚಾಮರಾಜನಗರ : ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್.ಕೃಷ್ಣ ಅವರು ತಮ್ಮ ದಿಢೀರ್ ಭೇಟಿ ಸಂದರ್ಭದಲ್ಲಿ ನ್ಯೂನತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ನಗರ ಸನಿಹದ ಮಲ್ಲಯ್ಯನಪುರ ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತ್ತುಗೊಳಿಸಲು ಹಾಗೂ ವಿವಿಧ ಇಲಾಖೆಗಳ ನಾಲ್ವರು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.

ಮಲ್ಲಯ್ಯನಪುರ ಗ್ರಾಮದ ಕ್ವಾಲಿಟಿ ನ್ಯಾಯಬೆಲೆ ಅಂಗಡಿ ವಿತರಕರಾದ ಮಲ್ಲೇದೇವರು ಅವರು ಆಹಾರ ಪದಾರ್ಥವನ್ನು ಪಡಿತರದಾರರಿಗೆ ಸಮರ್ಪಕವಾಗಿ ವಿತರಣೆ ಮಾಡದಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ವಿಚಾರಣೆ ಕಾಯ್ದಿರಿಸಿ ಪರವಾನಗಿಯನ್ನು ಇಲಾಖೆ ಉಪನಿರ್ದೇಶಕರು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ವಾರ್ಡನ್ ಲತಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ. ಆಯೋಗದ ಶಿಫಾರಸು ಆಧರಿಸಿ ಈ ಕ್ರಮ ವಹಿಸಲಾಗಿದೆ.

ಇದೇ ರೀತಿ, ಆಹಾರ ದಾಸ್ತಾನು ವ್ಯತ್ಯಾಸ, ವಹಿಗಳನ್ನು ನಿರ್ವಹಿಸದಿರುವುದು, ಇನ್ನಿತರ ನ್ಯೂನತೆಗಳ ಕಾರಣದಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಓರ್ವ ಹಾಸ್ಟೆಲ್ ವಾರ್ಡನ್, ಸರ್ಕಾರಿ ಶಾಲೆಯ ಮಧ್ಯಾಹ್ನದ ಬಿಸಿಯೂಟ ನಿರ್ವಹಣೆಗೆ ಸಂಬಂಽಸಿದಂತೆ ಓರ್ವರು, ಪೌಷ್ಟಿಕ ಆಹಾರವನ್ನು ಕೆಲ ಫಲಾನುಭವಿಗಳಿಗೆ ನೀಡದೆ ವಿತರಣೆ ಮಾಡಲಾಗಿದೆ ಎಂದು ಪುಸ್ತಕದಲ್ಲಿ ನಮೂದಿಸಿರುವ ಓರ್ವ ಅಂಗನವಾಡಿ ಕಾರ್ಯಕರ್ತೆ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲು ಸೂಚಿಸಲಾಗಿದೆ. ತಮ್ಮ ಶಿಫಾರಸು ಆಧರಿಸಿ ಕಡ್ಡಾಯ ರಜೆಯಂತಹ ಕ್ರಮವನ್ನು ಅಽಕಾರಿಗಳು ವಹಿಸಲಿದ್ದಾರೆ ಎಂದು ನಗರದಲ್ಲಿ ಬುಧವಾರ ಅಽಕಾರಿಗಳ ಸಭೆ ನಂತರ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಎಚ್.ಕೃಷ್ಣ ಸುದ್ದಿಗಾರರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ, ಜಿಪಂ ಸಿಇಒ ಮೋನಾ ರೋತ್, ಆಹಾರ ಆಯೋಗದ ಸದಸ್ಯರಾದ ಲಿಂಗರಾಜು ಕೋಟೆ, ಸುಮಂತ್‌ರಾವ್, ಕೆ.ಎಸ್.ವಿಜಯಲಕ್ಷ್ಮಿ, ಎ.ರೋಹಿಣಿಪ್ರಿಯ, ಮಾರುತಿ ದೊಡ್ಡಣ್ಣನವರ್, ಆಹಾರ ಉಪನಿರ್ದೇಶಕರಾದ ವಸುಂಧರಾ ಹೆಗಡೆ, ಇತರರು ಹಾಜರಿದ್ದರು.

 

Tags:
error: Content is protected !!