ಯಳಂದೂರು : ಕಳೆದ 4 ದಿನಗಳಿಂದ ತಾಲ್ಲೂಕಿನ ಕೆಸ್ತೂರು, ಮಲ್ಲಿಗೆಹಳ್ಳಿ, ಕಟ್ನವಾಡಿ ಗ್ರಾಮಗಳ ಬಳಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಚಿರತೆ ಶುಕ್ರವಾರ ಮಧ್ಯಾಹ್ನ ಕುಂತೂರು ಬೆಟ್ಟದಲ್ಲಿ ಪ್ರತ್ಯಕ್ಷವಾಗಿದೆ.
ಗುರುವಾರ ಕಟ್ನವಾಡಿ-ಕುಂತೂರು ಮಾರ್ಗದ ನಡುವೆ ಕಾಣಿಸಿಕೊಂಡಿದ್ದ ಚಿರತೆ ತಡರಾತ್ರಿ ಕೆಸ್ತೂರು ಬಳಿ ನಾಯಿಯೊಂದರ ಮೇಲೆ ದಾಳಿ ನಡೆಸಿದೆ.
ಶುಕ್ರವಾರ ಮಧ್ಯಾಹ್ನ ಕುಂತೂರು ಬೆಟ್ಟದ ಕಲ್ಲುಬಂಡೆಯ ಮೇಲೆ ಚಿರತೆ ಕುಳಿತಿರುವ ಚಿತ್ರ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ 4 ದಿನಗಳಿಂದ ಚಿರತೆಯ ಸೆರೆಗಾಗಿ ಶ್ರಮ ವಹಿಸುತ್ತಿರುವ ಮೈಸೂರಿನ ಚಿರತೆ ಸೆರೆ ವಿಶೇಷ ಕಾರ್ಯಪಡೆಯ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯ ಜಾಡು ಹಿಡಿದು ಬೆಟ್ಟದ ಬಳಿ ಬೋನು ಇರಿಸಿದ್ದಾರೆ.
ಚಿರತೆಯು ಕುಂತೂರು ಬೆಟ್ಟದ ಕಡೆಯಿಂದ ಬೆಟ್ಟದ ಹೊಸೂರು ಕಡೆಗೆ ತೆರಳಿದೆ ಎಂದು ಸ್ಥಳೀಯರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಕಳೆದ 4 ದಿನಗಳಿಂದ ಚಾಲಾಕಿ ಚಿರತೆಯು ಜಾಡು ಬದಲಿಸುತ್ತ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಯಾಮಾರಿಸುತ್ತಿದೆ.