ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ಜರುಗಿದೆ.
ಟಿ.ನರಸೀಪುರ ತಾಲೂಕಿನ ಮುಡುಕನಪುರ ಗ್ರಾಮದ ರಾಜಮಣಿ, ಟಿ ನರಸೀಪುರ ತಾಲೂಕಿನ ಲಿಖಿತ, ರುಕ್ಮಿಣಿ, ಕೊಳ್ಳೇಗಾಲದ ಮಂಜುನಾಥ್, ಕಾವ್ಯ, ಪ್ರತಾಪ್ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರೆ, ಯಳಂದೂರು ತಾಲೂಕಿನ ಮೆಲ್ಲಹಳ್ಳಿ ಗ್ರಾಮದ ಜ್ಯೋತಿರವರಿಗೆ, ಮೈಸೂರಿನ ಇಲವಾಲದ ಮಹೇಶ್ ರವರಿಗೆ ಬಲಕೈಕಾಲು ತೀವ್ರ ಗಾಯವಾಗಿವೆ. ಕೊಳ್ಳೇಗಾಲ ಮೂಲದ ಸಣ್ಣಮ್ಮ ಎಂಬುವರಿಗೆ ಸೊಂಟ ಮುರಿದಿದ್ದು ಸ್ಫೈನಲ್ ಕಾರ್ಡ್ ಮುರಿದಿರುವುದರಿಂದ ತೀವ್ರ ಗಾಯಗೊಂಡಿದ್ದಾರೆ.
ಘಟನೆ ವಿವರ: ವಿವಿಧ ಗ್ರಾಮಗಳಿಂದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಾಪಸ್ ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಸಂಖ್ಯೆ ( KA-09 F5111)ಮೂಲಕ 50 ಪ್ರಯಾಣಿಕರು ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಹಾಲರವಿ ಹಳ್ಳದ ಸಮೀಪ ಬಸ್ ಪಲ್ಟಿಯಾಗಿದೆ.
ತಕ್ಷಣ ದಾರಿ ಹೋಕರು ತುರ್ತು ಆಂಬುಲೆನ್ಸ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪ್ರಾಧಿಕಾರದ ಕಾರ್ಯದರ್ಶಿ ಎಈ ರಘು ಪ್ರಾಧಿಕಾರದ ನೂತನ ಆಂಬುಲೆನ್ಸ್ ಹಾಗೂ ೧೦೮ ಆಂಬುಲೆನ್ಸ್ ಮೂಲಕ ಕೆಲವು ಗಾಯಾಳುಗಳನ್ನು ಮಲೆಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ, ಹೆಚ್ಚು ಗಾಯಗೊಂಡಿದ್ದ ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಬಸ್ ಚಾಲಕ ಅನಿಲ್ ಕುಮಾರ್ ಹಾಗೂ ನಿರ್ವಾಹಕ ಜಗದೀಶ್ ರವರು ಸಹ ಗಾಯಗೊಂಡಿದ್ದಾರೆ. ಅಪಘಾತದಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಸ್ ಚಾಲಕ ಅನಿಲ್ ಬ್ರೇಕ್ ಪೆಲ್ ಆಗಿ ಪಲ್ಟಿಯಾಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪ್ರಯಾಣಿಕರು ಬಸ್ ಚಾಲಕನ ಅತಿ ವೇಗವೇ ಈ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ ಟಿ ಕವಿತಾ ಪ್ರಾಧಿಕಾರದ ಕಾರ್ಯದರ್ಶಿ ರಘು, ಡಿಎಚ್ಒ ಡಾ, ಚಿದಂಬರಂ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ, ಮ.ಬೆಟ್ಟದ ಇನ್ಸ್ಪೆಕ್ಟರ್ ಜಗದೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲು ಸೂಕ್ತ ಕ್ರಮ ವಹಿಸಿದ್ದಾರೆ.
ಘಟನೆಯ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





