ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ರೈತರು ಬೆಳೆದ ಸೂರ್ಯಕಾಂತಿ ಬೆಳೆ ಮುದುಡಿ ಹೋಗಿದ್ದು, ಅನ್ನದಾತರು ಕಂಗಾಲಾಗಿದ್ದಾರೆ.
ಈ ಬಾರಿ ಸೂರ್ಯಕಾಂತಿ ಬೆಳೆಯಿಂದ ಉತ್ತಮ ಆದಾಯ ಸಿಗುತ್ತದೆ ಎಂಬ ಆಸೆಯಲ್ಲಿದ್ದ ರೈತರಿಗೆ ಮಳೆರಾಯ ತಣ್ಣೀರು ಎರಚಿದ್ದಾನೆ. ಸಾಲ ಮಾಡಿ ಸೂರ್ಯಕಾಂತಿ ಬೆಳೆದಿದ್ದ ರೈತರು ಕಟಾವು ಮಾಡಲು ಸಾಧ್ಯವಾಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾರೀ ಮಳೆಯಿಂದ ಜಮೀನಿನಲ್ಲಿ ನೀರು ನಿಂತಿದ್ದು, ನೀರು ಇಂಗದೇ ಸೂರ್ಯಕಾಂತಿ ಕಟಾವಿಗೆ ಅಡ್ಡಿಯಾಗಿದೆ. ಇನ್ನು ಹಲವು ರೈತರು ಸೂರ್ಯಕಾಂತಿ ಕಟಾವು ಮಾಡಿದ್ದು, ಬೀಜವನ್ನು ಒಣಗಿಸಲು ಬಿಸಿಲಿಲ್ಲದೇ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸೂರ್ಯಕಾಂತಿ ಬೆಳೆ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ರೈತರೆಲ್ಲಾ ಆಗ್ರಹಿಸಿದ್ದಾರೆ.
ಇನ್ನು ಸರ್ಕಾರ ಖರೀದಿ ಕೇಂದ್ರ ತೆರೆಯದ ಪರಿಣಾಮ ಬೆಲೆ ಭಾರೀ ಕುಸಿತವಾಗಿದೆ. ಪರಿಸ್ಥಿತಿಯ ಲಾಭ ಪಡೆಯುತ್ತಿರುವ ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ತೆಗೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಆದ್ದರಿಂದ ಸರ್ಕಾರವೇ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆದರೆ ಮಾರುಕಟ್ಟೆಯಲ್ಲಿ ದರ ಹೆಚ್ಚಾಗಿ ಅದರ ಲಾಭ ರೈತರಿಗೆ ದೊರೆಯಲಿದೆ ಎಂದು ರೈತರು ಒತ್ತಾಯಿಸಿದ್ದಾರೆ.