ಹನೂರು: ಕಾಡುಹಂದಿಗಳ ಬೇಟೆಗೆ ಇರಿಸಿದ್ದ ಸಿಡಿಮದ್ದು ಸಿಡಿದು ಕರಡಿಯ ಬಾಯಿ ಛಿದ್ರಗೊಂಡು ಮೃತಪಟ್ಟಿರುವ ಘಟನೆ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೆಳ್ಳನೂರು ಗ್ರಾಮದ ಬಳಿ ನಡೆದಿದೆ.
ಕಾಡಿನಿಂದ ಮೇವು ಹಾಗೂ ನೀರು ಅರಸಿ ನಾಡಿನತ್ತ ಬಂದಿದ್ದ ಕರಡಿಯೊಂದು ತೆಳ್ಳನೂರಿನ ಅರಣ್ಯ ಪ್ರದೇಶದ ಸಮೀಪದಲ್ಲಿರುವ ಜಮೀನುಗಳ ರಸ್ತೆಯಲ್ಲಿ ತೆರಳುತ್ತಿದ್ದಾಗ ಆಹಾರದ ಜೊತೆ ಇದ್ದ ಸ್ಫೋಟಕಕ್ಕೆ ಬಾಯಿ ಹಾಕಿ ತಿನ್ನಲು ಮುಂದಾಗಿದೆ.
ಈ ವೇಳೆ ಸ್ಫೋಟಕ ಸಿಡಿದು ಕರಡಿಯ ಬಾಯಿ ಛಿದ್ರಗೊಂಡಿದ್ದು ಕೆಲಕಾಲ ಕರಡಿ ನರಳಾಡಿ ಮೃತಪಟ್ಟಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಸಿಡಿಮದ್ದು ಸಿಡಿದು ಜಾನುವಾರುಗಳು ಮೃತಪಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇದೀಗ ಕಾಡುಪ್ರಾಣಿಯೊಂದು ಸಿಡಿಮದ್ದಿಗೆ ಬಲಿಯಾಗಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.
ಘಟನಾ ಸ್ಥಳಕ್ಕೆ ಕಾವೇರಿ ವನ್ಯಜೀವಿ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ಮರಿಸ್ವಾಮಿ, ಆರ್ಎಫ್ಒ ಸುಂದರ್, ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಶುವೈದ್ಯಾಧಿಕಾರಿಗಳು ಕರಡಿಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.





