ಹನೂರು: ಹನೂರು, ಕೊಳ್ಳೇಗಾಲ, ಯಳಂದೂರು ತಾಲೂಕಿನ ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕೆ ಸಿ ಮಾದೇಶ್, ಕಾರ್ಯದರ್ಶಿ ಸಿದ್ದಲೀಂಗೇಗೌಡ ರವರನ್ನು ವಿವಿಧ ಪದಾಧಿಕಾರಿಗಳು ಸನ್ಮಾನಿಸಿದರು.
ನಂತರ ನೂತನ ಅಧ್ಯಕ್ಷ ಕೆ ಸಿ ಮಾದೇಶ್ ಮಾತನಾಡಿ ಕಳೆದ ೧೩ ವರ್ಷಗಳಿಂದ ಚನ್ನಾಲಿಂಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷನಾಗಿ ಕೆಲಸ ಮಾಡಿರುವ ಅನುಭವವಿದೆ ನಾನು ಅಧ್ಯಕ್ಷನಾಗುವ ಮೊದಲು ಸಂಘವು ನಷ್ಟದಲ್ಲಿತ್ತು. ಇದೀಗ ಲಾಭದಲ್ಲಿ ನಡೆಯುತ್ತಿದೆ. ಹೊಸದಾಗಿ ನಿವೇಶನ ಖರೀದಿ ಮಾಡಿ ನೂತನ ಕಟ್ಟಡವನ್ನು ಸಹ ನಿರ್ಮಾಣ ಮಾಡಿದ್ದೇವೆ. ಸಂಘದ ಷೇರು ದಾರರಿಗೆ ೨.೨೭ ಕೋಟಿ ಹ ಸಾಲ ಕೊಡಿಸಿ ಮಾದರಿ ಸಂಘವನ್ನಾಗಿ ಮಾಡಿದ್ದೇನೆ ಎಂದರು.
ಇನ್ನು ಮೂರು ತಾಲೂಕುಗಳಲ್ಲಿ ಇರುವ ಸಮಾಜದವರೆಲ್ಲರೂ ಸೇರಿ ಒಕ್ಕಲಿಗ ಸಂಘ ರಚನೆ ಮಾಡಿ ಸಮಾಜದ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ಶ್ರೀ ಜಿ.ವಿ ಗೌಡ ಕಾಲೇಜಿನಲ್ಲಿ ಎಲ್ ಕೆ ಜಿ ಯಿಂದ ಪ್ರಾರಂಭವಾಗಿ ದ್ವಿತೀಯ ಪಿಯುಸಿ ಹಾಗೂ ಡಿಎಡ್ ವರೆಗೂ ನಡೆಯುತ್ತಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಸಂಘದ ಗೌರವಾಧ್ಯಕ್ಷರು ಹಾಗೂ ಮಾಜಿ ಶಾಸಕ ಆರ್ ನರೇಂದ್ರ ರವರ ಮಾರ್ಗದರ್ಶನದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡುವ ಮೂಲಕ ಸಂಘಕ್ಕೆ ಉತ್ತಮ ಹೆಸರು ತರುತ್ತೇನೆ ಈ ಕಾರ್ಯಕ್ಕೆ ಸಂಘದ ಎಲ್ಲಾ ನಿರ್ದೇಶಕರುಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಜಿಲ್ಲಾ ಹಾಪ್ ಕಾಮ್ಸ್ ನಿರ್ದೇಶಕ ಶಿವಪುರ ಲೋಕೇಶ್, ದೊಡ್ಡಿಂದುವಾಡಿ ವೀರಭದ್ರ ಸ್ವಾಮಿ, ಉತ್ತಂಬಳ್ಳಿ ಸತೀಶ್, ಪಿಎಸಿಸಿ ನಿರ್ದೇಶಕ ಲಕ್ಕರಸನ ಪಾಳ್ಯ ಮಹೇಶ್, ಕೆಂಪನ ಪಾಳ್ಯ ಮಹೇಶ್, ಕುಂತೂರು ಬೃಂಗೇಶ್ ಮುಡಿಗುಂಡ ರಾಜೇಶ್, ಕಾಮಗೆರೆ ಗ್ರಾಮದ ರವಿ ಮಹದೇವಪ್ಪ, ಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷ ಸುರಾಪುರ ರಾಜು, ಅಲ್ಕೆರೆ ಅಗ್ರಹಾರದ ಜಯಶೇಖರ್ ಸನ್ಮಾನಿಸಿ ಶುಭ ಕೋರಿದರು.





