Mysore
27
few clouds

Social Media

ಮಂಗಳವಾರ, 24 ಮಾರ್ಚ್ 2026
Light
Dark

ಹನೂರು | ಇಂದಿರಾ ಕ್ಯಾಂಟೀನ್‌ಗೆ ದಿಢೀರ್‌ ಭೇಟಿ ನೀಡಿದ ಶಾಸಕ ಮಂಜುನಾಥ್‌

ಹನೂರು : ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಶಾಸಕ ಎಂ.ಆರ್ ಮಂಜುನಾಥ್ ದಿಢೀರ್ ಭೇಟಿ ನೀಡಿ ಗ್ರಾಹಕರಿಗೆ ತಯಾರಿಸಿದ್ದ ಅನ್ನ ಸಾಂಬಾರ್ ಸೇವಿಸಿ ರುಚಿ ಪರಿಶೀಲಿಸಿದರು.

ಈ ವೇಳೆ ಅಡುಗೆ ತಯಾರಕರ ಜೊತೆ ಮಾತನಾಡಿ, ಸರ್ಕಾರ ಕೂಲಿ ಕಾರ್ಮಿಕರು ನಿರ್ಗತಿಕರು ಅಸಹಾಯಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ತಿಂಡಿ ನೀಡಲು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗಿದೆ. ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಪ್ರತಿನಿತ್ಯ ಮೆನು ಪ್ರಕಾರ ಬರುವಂತಹ ಗ್ರಾಹಕರಿಗೆ ಗುಣಮಟ್ಟದ ಆಹಾರ ತಯಾರಿಸಿ ವಿತರಿಸಬೇಕು. ಪ್ರತಿನಿತ್ಯ ತಾಜಾ ತರಕಾರಿ ಸೊಪ್ಪುಗಳನ್ನು ಹಾಕಿ ಅಡಿಗೆ ತಯಾರು ಮಾಡಬೇಕು ಎಂದು ಸಲಹೆ ನೀಡಿದರು.

ಪ್ರತಿನಿತ್ಯ ಬೆಳಗ್ಗೆ,ಮಧ್ಯಾಹ್ನ, ರಾತ್ರಿ ವೇಳೆ ಎಷ್ಟು ಗ್ರಾಹಕರು ಬರುತ್ತಿದ್ದಾರೆ ಪ್ರತಿನಿತ್ಯ ಎಷ್ಟು ಅಡುಗೆ ತಯಾರು ಮಾಡುತ್ತಿದ್ದೀರಾ ಎಂದು ಅಡುಗೆ ತಯಾರಿಕರಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಮಾತನಾಡಿದ ಅವರು, ಬೆಳಗಿನ ವೇಳೆ ಕೂಲಿ ಕಾರ್ಮಿಕರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಬೆಳಿಗ್ಗೆ ಹಾಗೂ ಮಧ್ಯಾಹ್ನದ ವೇಳೆ ಮೆನುವಿನ ಪ್ರಕಾರ ಹೆಚ್ಚು ಕಡೆಗೆ ತಯಾರು ಮಾಡಿಕೊಳ್ಳಬೇಕು. ರಾತ್ರಿ ವೇಳೆ ಜನಸಂದಣಿ ಕಡಿಮೆ ಇರುವುದರಿಂದ ಕಡಿಮೆ ಮಾಡಿಕೊಂಡು ಸರ್ಕಾರದ ನಿಯಮದಂತೆ ಪ್ರತಿನಿತ್ಯ ಗುಣಮಟ್ಟದಿಂದ ವಿತರಿಸಬೇಕು.

ಮೆನುವಿನ ಪ್ರಕಾರ ಅನ್ನ ಸಾಂಬಾರ್ ಇಡ್ಲಿ ದೋಸೆ ಚಪಾತಿ ಮೊಳಕೆ ಕಾಳು ಸಾಂಬಾರ್ ವಿತರಣೆ ಮಾಡಬೇಕು. ಆಗಾಗ ಪರಿಶೀಲನೆ ಮಾಡುತ್ತೇನೆ ಒಂದೊಮ್ಮೆ ಸಾರ್ವಜನಿಕರಿಂದ ದೂರು ಬಂದರೆ ಟೆಂಡರ್ ರದ್ದು ಮಾಡಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇಂದಿರಾ ಕ್ಯಾಂಟೀನ್ ಮುಂಭಾಗದ ಅಂಗಡಿ ತೆರವು ಮಾಡಿ
ಹನೂರು ಪಟ್ಟಣದ ಇಂದಿರಾ ಕ್ಯಾಂಟೀನ್ ಮುಂಭಾಗದ ಪಾದ ಚಾರಿಮಾರ್ಗದಲ್ಲಿ ಕೆಲವರು ಅಕ್ರಮವಾಗಿ ತಳ್ಳುಗಾಡಿಗಳನ್ನು ನಿಲ್ಲಿಸಿಕೊಂಡ ವ್ಯಾಪಾರ ಮಾಡುತ್ತಿರುವುದರಿಂದ ಕ್ಯಾಂಟೀನ್ ಗೆ ಬರುವವರೆಗೆ ತೊಂದರೆ ಆಗುತ್ತದೆ. ಪುಟ್ಬಾತ್ ನಲ್ಲಿ ವ್ಯಾಪಾರ ಮಾಡುವವರು ಪ್ರತಿನಿತ್ಯ ಬೆಳಗ್ಗೆ ತಂದು ರಾತ್ರಿವರೆಗೆ ವ್ಯಾಪಾರ ಮಾಡಿ ಗಾಡಿಗಳನ್ನು ತೆಗೆದುಕೊಂಡು ಹೋಗಬೇಕು ಇಲ್ಲದಿದ್ದರೆ ಅಂತಹ ಗಾಡಿಗಳನ್ನು ಪಟ್ಟಣ ಪಂಚಾಯಿತಿಯವರು ತಮ್ಮ ವಶಕ್ಕೆ ಪಡೆದುಕೊಳ್ಳಬೇಕು, ನಾಳೆಯಿಂದ ಇಂದಿರಾ ಕ್ಯಾಂಟೀನ್ ಮುಂಭಾಗ ಯಾವುದೇ ಗಾಡಿಗಳನ್ನು ನಿಲ್ಲಿಸಲು ಅವಕಾಶ ಮಾಡಿಕೊಡಬಾರದು ಎಂದರು.

ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೂಕ್ತ ಕ್ರಮ ವಹಿಸಿ
ಹನೂರು ಪಟ್ಟಣದ ನಾಗಪ್ಪ ವೃತ್ತ ಹಾಗೂ ಮುಖ್ಯರಸ್ತೆಯಲ್ಲಿ ಎಲ್ಲೆಂದರಲ್ಲಿ ತಳ್ಳುವ ಗಾಡಿಗಳನ್ನು ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರಿಗೆ ಪ್ರತಿನಿತ್ಯ ತೊಂದರೆ ಆಗುತ್ತಿದೆ. ಯಾವುದಾದರೂ ಅಪಘಾತ ಅವಗಡಗಳು ಸಂಭವಿಸಿದರೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ನಿಲ್ಲಿಸಿಕೊಂಡಿರುವ ತಳ್ಳುವ ಗಾಡಿ ವ್ಯಾಪಾರಸ್ಥರು ನಿಮ್ಮ ಗಾಡಿಗಳನ್ನು ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಲ್ಲಿಸಿಕೊಂಡು ವ್ಯಾಪಾರ ಮಾಡಬೇಕು ಒಂದೊಮ್ಮೆ ಯಾವುದಾದರು ಅಪಘಾತಗಳು ಸಂಭವಿಸಿದರೆ ಅದಕ್ಕೆ ನೀವೇ ಹೊಣೆಗಾರರಾಗುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು.

ಪರಿಶೀಲನೆ ವೇಳೆ ಸ್ಥಳಕ್ಕಾಗಿಸಿದ ಇನ್ಸ್ಪೆಕ್ಟರ್ ಆನಂದ್ ಮೂರ್ತಿರವರಿಗೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಇದೇ ಮಾರ್ಗವಾಗಿ ತೆರಳಬೇಕು ದ್ವಿಚಕ್ರ ವಾಹನ ಸವಾರರು ಹಾಗೂ ತಳ್ಳುವ ಗಾಡಿಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಚರಣೆ ನಡೆಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಗಾಡಿಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.

ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗ ವ್ಯಕ್ತಿಯೊಬ್ಬರು ತಳ್ಳುವ ಗಾಡಿಯನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಿ ವ್ಯಾಪಾರ ವ್ಯಾಪಾರ ಮಾಡುತ್ತಿರುವುದನ್ನು ಗಮನಿಸಿದ ಶಾಸಕ ಎಂಆರ್ ಮಂಜುನಾಥ್ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಪ್ರತಿನಿತ್ಯ ನೂರಾರು ಬಸ್ಸುಗಳು ನಿಲ್ದಾಣಕ್ಕೆ ತೆರಳೋದಲ್ಲದೆ ಆಗಮಿಸುತ್ತದೆ.ಈ ಸ್ಥಳದಲ್ಲಿ ಅಂಗಡಿ ಇಟ್ಟುಕೊಂಡಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ನೀವು ಬೇರೆ ಕಡೆ ನಿಮ್ಮ ಅಂಗಡಿಯನ್ನು ಸ್ಥಳಾಂತರ ಮಾಡಿಕೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿದರು

ಪರಿಶೀಲನೆ ವೇಳೆ ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಮಹಾದೇಶ್, ಮಡಿವಾಳ ಸಮುದಾಯದ ಜಿಲ್ಲಾ ಉಪಾಧ್ಯಕ್ಷ ವಿಜಯ್ ಕುಮಾರ್, ಇನ್ಸ್ಪೆಕ್ಟರ್ ಆನಂದಮೂರ್ತಿ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಪ್ರಕಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags:
error: Content is protected !!