Mysore
17
overcast clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಹನೂರು: ಪಾದಯಾತ್ರಿಕರು ಬಿಸಾಡುವ ಕಸ ಸಂಗ್ರಹಣೆ ಡಬ್ಬ ನಿರ್ಮಾಣ ಕಾಮಗಾರಿಗೆ ಚಾಲನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು 

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿರುವ ಭಕ್ತಾದಿಗಳು ರಸ್ತೆ ಬದಿಯಲ್ಲಿ ಬಿಸಾಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಲು ಶ್ರೀ ವಜ್ರಮಲೆ ಮಹದೇಶ್ವರ ಸೇವಾ ಬಳಗದ ವತಿಯಿಂದ ಕಸ ಸಂಗ್ರಹಣೆ ಬಾಕ್ಸ್ಗಳನ್ನು ಇಡುತ್ತಿರುವುದು ಸಂತಸದ ವಿಚಾರ ಎಂದು ಬಿಜೆಪಿ ಮುಖಂಡ ನಿಶಾಂತ್ ತಿಳಿಸಿದರು.

ಹನೂರು ಪಟ್ಟಣ ಹೊರವಲಯದ ಎಲ್ಲೇಮಾಳ ಮುಖ್ಯ ರಸ್ತೆಯ ನರ್ಸರಿ ಸಮೀಪ ಪಾದಯಾತ್ರಿಕರು ಬಿಸಾಡುವ ಕಸ ಸಂಗ್ರಹಣೆ ಡಬ್ಬ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀಕ್ಷೇತ್ರ ಮಲೆ ಮಹದೇಶ್ವರ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತ ಕ್ಷೇತ್ರವನ್ನಾಗಿ ಘೋಷಣೆ ಮಾಡಲಾಗಿದೆ. ಆದರೆ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತ ಪ್ರವಾಸಿ ತಾಣವನ್ನಾಗಿ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ಶ್ರೀ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳು ಸಹ ಪ್ಲಾಸ್ಟಿಕ್ ಮುಕ್ತ ಮಲೆ ಮಹದೇಶ್ವರ ಬೆಟ್ಟ ಮಾಡುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದರು.

ಶ್ರೀ ಕ್ಷೇತ್ರಕ್ಕೆ ಬರುವಂತಹ ಪಾದಯಾತ್ರಿಕರಿಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ಮಾಡಿಕೊಟ್ಟಿಲ್ಲ. ಬರುವಂತಹ ಭಕ್ತಾದಿಗಳಿಗೆ ದಾನಿಗಳು ಉಚಿತ ದಾಸೋಹ ಕುಡಿಯುವ ನೀರು ಮಜ್ಜಿಗೆ ವಿತರಣೆ ಮಾಡುತ್ತಿದ್ದಾರೆ. ಅದೇ ರೀತಿ ಟಿ ನರಸೀಪುರ ಗ್ರಾಮದ ಶ್ರೀ ವಜ್ರಮಲೆ ಮಹದೇಶ್ವರ ಸೇವಾ ಬಳಗದ ವತಿಯಿಂದ ಪ್ರತಿವರ್ಷ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಬರುವ ಭಕ್ತಾದಿಗಳಿಗೆ ಎರಡು ದಿನಗಳ ಕಾಲ ನಿರಂತರವಾಗಿ ಉಚಿತ ದಾಸೋಹ ಏರ್ಪಡಿಸುತ್ತಿದ್ದಾರೆ. ಇದರ ಜೊತೆಗೆ ಸಾಮಾಜಿಕ ಸೇವೆ ಮಾಡುವ ನಿಟ್ಟಿನಲ್ಲಿ ಅರಣ್ಯ ಸಂಪತ್ತು ಮತ್ತು ವನ್ಯಪ್ರಾಣಿ ಸಂರಕ್ಷಣೆ ಮಾಡಲು ಹನೂರು ಪಟ್ಟಣದಿಂದ ಕೌದಳ್ಳಿ ಗ್ರಾಮದವರೆಗೆ ಕಸ ಸಂಗ್ರಹಣೆ ಮಾಡಲು ಬಾಕ್ಸ್ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಶ್ರೀ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳು ಪ್ಲಾಸ್ಟಿಕ್ ಪದಾರ್ಥಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ನಿಗದಿತ ಸ್ಥಳದಲ್ಲಿ ಹಾಕಿ ವನ್ಯ ಪ್ರಾಣಿಗಳನ್ನು ಸಂರಕ್ಷಣೆ ಮಾಡಬೇಕು. ತಿರುಪತಿ ದೇವಸ್ಥಾನದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಅದೇ ರೀತಿ ಹನೂರು ಪಟ್ಟಣದಿಂದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ವರೆಗೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಮಾಡಲು ಸಾರ್ವಜನಿಕರು ಹಾಗೂ ಪಾದಯಾತ್ರೆಕರ ಸಹಕಾರ ಅತಿ ಮುಖ್ಯವಾಗಿದೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಪಾದಯಾತ್ರೆಗೆ ಫೆಬ್ರವರಿ.13 ಮತ್ತು 14ರಂದು ನಿರಂತರವಾಗಿ ಎರಡು ದಿನಗಳ ಕಾಲ ಉಚಿತ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪಾದಯಾತ್ರಿಕರು ಇದರ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಟಿ ನರಸೀಪುರದ ಸಮಾಜಸೇವಕ ಮಂಜುನಾಥ್ ಮಾತನಾಡಿ, ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಹೋಗುವ ಪಾದಯಾತ್ರಿಕರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸಾಡುತ್ತಿರುವುದರಿಂದ ಪರಿಸರಕ್ಕೆ ಮಾರಕವಾಗಿದೆ ಇದರಿಂದ ವನ್ಯ ಪ್ರಾಣಿಗಳ ಸಂಕುಲ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಬಂಡಿಪುರ ಹಾಗೂ ನಾಗರಹೊಳೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಪ್ರವಾಸಿಗರನ್ನು ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ನಿಗದಿತ ಸ್ಥಳ ಗುರುತಿಸಿ ಚೆಕ್ಪೋಸ್ಟ್ ನಿರ್ಮಾಣ ಮಾಡಿ ಪಾದಯಾತ್ರೆಯ ಮೂಲಕ ಬರುವ ಭಕ್ತಾದಿಗಳಿಗೆ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಅರಿವು ಮೂಡಿಸಿ ಪ್ಲಾಸ್ಟಿಕ್ ಬಳಸದಂತೆ ತಿಳುವಳಿಕೆ ನೀಡಬೇಕು. ಕೌದಳ್ಳಿ ಗ್ರಾಮದಲ್ಲಿ ಎರಡು ದಿನ ಹಮ್ಮಿಕೊಂಡಿರುವ ಉಚಿತ ದಾಸೋಹ ಕಾರ್ಯಕ್ರಮಕ್ಕೆ ಸಮಾಜ ಸೇವಕ ನಿಶಾಂತ ಹಾಗೂ ಪೊನ್ನಾಚಿ ಮಹದೇವಸ್ವಾಮಿ ರವರು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಕೈಲಾದ ಮಟ್ಟಿಗೆ ಮಲೆ ಮಾದೇಶ್ವರ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗುವುದು ಎಂದರು.

ಇದೆ ಸಂದರ್ಭದಲ್ಲಿ ಹನೂರು ಬಫರ್ ವಲಯದ ಡಿ ಆರ್ ಎಫ್ ಲಿಂಗರಾಜು, ವಜ್ರಮಲೆ ಮಹದೇಶ್ವರ ಸೇವಾ ಬಳಗದ ಮಂಜುನಾಥ್, ಶ್ರೀ ಕಂಠ ಪ್ರಸಾದ್, ಮಹಾದೇವಸ್ವಾಮಿ, ಮಂಜುನಾಥ್, ಕೃಷ್ಣಪ್ಪ, ಚಂದ್ರು ಸೇರಿದಂತೆ ಇನ್ನಿತರರು ಇದ್ದರು.

 

 

Tags:
error: Content is protected !!