ಮಹಾದೇಶ್ ಗೌಡ, ಹನೂರು
ಹನೂರು: ತಾಲೂಕಿನ ಕೌದಳ್ಳಿ ಕುರಟ್ಟಿ ಹೊಸೂರು ಮಾರ್ಗದ ಶ್ರೀ ಆಂಜನೇಯ ಸ್ವಾಮಿ ದೇಗುಲದ ಬಳಿ ಸೋಮವಾರ ಕಿಡಿಗೇಡಿಗಳು ಅಡಗಿಸಿಟ್ಟಿದ್ದ ಸಿಡಿಮದ್ದಿಗೆ 3 ಹಸುಗಳ ಬಾಯಿ ಛಿದ್ರಗೊಂಡಿದ್ದು, ಈ ಬಗ್ಗೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕುರಟ್ಟಿ ಹೊಸೂರು ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಬೆಳಗ್ಗೆ ಕೌದಳ್ಳಿ ಗ್ರಾಮದ ರಾಮಪ್ಪ, ಮುರುಗೇಶ್ ಹಾಗೂ ಕೃಷ್ಣಯ್ಯ ಎಂಬುವರು ಹಸು ಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಆಂಜನೇಯಸ್ವಾಮಿ ದೇಗುಲದ ಬಳಿ ಹಸುಗಳು ಮೇಯಲು ಬಾಯಿ ಹಾಕಿದಾಗ ಕಿಡಿಗೇಡಿಗಳು ಕಾಡು ಪ್ರಾಣಿ ಗಳನ್ನು ಬೇಟೆಯಾಡುವ ಉದ್ದೇಶದಿಂದ ಅಡಗಿಸಿಟ್ಟಿದ್ದ ಸಿಡಿ ಮದ್ದು ಸ್ಫೋಟಗೊಂಡು 3 ಹಸುಗಳ ಬಾಯಿ ಛಿದ್ರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಕಳೆದ 2 ತಿಂಗಳ ಹಿಂದೆಯೂ ಇದೇ ಮಾರ್ಗದಲ್ಲಿ ಹಸುವೊಂದು ಕಿಡಿಗೇಡಿಗಳ ಈ ಕೃತ್ಯಕೆ ಬಲಿಯಾಗಿತ್ತು. ಜತೆಗೆ ಇತ್ತೀಚಿಗೆ ಹನೂರು ಸಮೀಪದ ಬೂದುಬಾಳು ಗ್ರಾಮದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು.
ಸ್ಥಳಕ್ಕೆ ಎಸ್ಪಿ ಡಾ. ಬಿ.ಟಿ ಕವಿತಾ, ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಮತ್ತೆ ಸಿಡಿಮದ್ದು ಸಿಡಿತಕ್ಕೆ 3 ಹಸುಗಳ ಬಾಯಿ ಛಿದ್ರ ವಾಗಿರುವ ಬಗ್ಗೆ ರೈತರಿಂದ ತೀವ್ರ ಆಕ್ಷೇಪ ವ್ಯಕ್ತ ವಾಗಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳುವಂತೆ ಹಾಗೂ ಈ ದುಷ್ಕೃತ್ಯಕ್ಕೆ ಕಡಿವಾಣ ಹಾಕುವಂತೆ ಒತ್ತಾಯ ಕೇಳಿ ಬಂದಿದೆ.
ಘಟನಾ ಸ್ಥಳಕ್ಕೆ ಎಸ್ ಪಿ ಡಾ. ಬಿ ಟಿ.ಕವಿತಾ, ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ, ಇನ್ಸ್ಪೆಕ್ಟರ್ ಚಿಕ್ಕ ರಾಜ ಶೆಟ್ಟಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





