ಹನೂರು: ತಾಲ್ಲೂಕಿನ ಕೌದಳ್ಳಿ ಗ್ರಾಮದ ನಾಯಕ ಸಮುದಾಯದ ಬಡಾವಣೆಯಲ್ಲಿ ನೂತನವಾಗಿ ಅಕ್ಕ ಮಾರಮ್ಮ ದೇವಸ್ಥಾನ ನಿರ್ಮಾಣ ಮಾಡಲು ಮಾಜಿ ಶಾಸಕ ಆರ್ ನರೇಂದ್ರ ಭೂಮಿ ಪೂಜೆ ಸಲ್ಲಿಸಿದರು.
ನಂತರ ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಕೌದಳ್ಳಿ ಗ್ರಾಮದಲ್ಲಿ ನಾಯಕ ಸಮುದಾಯದವರು ಒಂದು ಕೋಟಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ವಿನೂತನ ಮಾದರಿಯಲ್ಲಿ ಅಕ್ಕ ಮಾರಮ್ಮ ದೇವಾಲಯ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಚಾರ. ನಮ್ಮ ಹಿಂದೂ ಧರ್ಮದವರು ಮಾರಮ್ಮ, ಮಲೆ ಮಹದೇಶ್ವರ, ಸಿದ್ದಪ್ಪಾಜಿ, ವೆಂಕಟೇಶ್ವರ ಸ್ವಾಮಿ ಸೇರಿದಂತೆ ನೂರಾರು ದೇವತೆಗಳನ್ನು ಪೂಜಿಸುವುದು ಸಂಪ್ರದಾಯ. ಇದೇ ನಿಟ್ಟಿನಲ್ಲಿ ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ದೇವಾಲಯ ನಿರ್ಮಾಣ ಮಾಡುತ್ತಿದ್ದಾರೆ. ಈ ದೇವಾಲಯದ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಂಡು ಭಕ್ತರಿಗೆ ಮಾರಮ್ಮನ ಆಶೀರ್ವಾದ ಸಿಗಲಿ ಎಂದು ಶುಭ ಹಾರೈಸಿದರು.
ಸಮುದಾಯ ಭವನಕ್ಕೆ ಭೇಟಿ: ನಾನು ಶಾಸಕನಾಗಿದ್ದಾಗ ಕೌದಳ್ಳಿ ಗ್ರಾಮದ ನಾಯಕ ಸಮುದಾಯದವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು 50 ಲಕ್ಷ ಅನುದಾನ ಮಂಜೂರು ಮಾಡಿಸಿದ್ದೆ, ಇದೀಗ ಮೊದಲ ಅಂತಸ್ತಿನ ಕಟ್ಟಡ ಪೂರ್ಣಗೊಂಡಿದ್ದು, ಎರಡನೇ ಅಂತಸ್ತು ಹಾಗೂ ಅಡುಗೆ ಮನೆಗೆ ಅನುದಾನ ಕೊಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರುಗಳನ್ನು ಭೇಟಿ ಮಾಡಿ ಸಮುದಾಯ ಭವನಕ್ಕೆ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಈ ವೇಳೆ ವಿವಿಧ ಸಮುದಾಯದ ಮುಖಂಡರುಗಳು, ಯಜಮಾನರು, ಸಮುದಾಯದ ಯುವ ಮುಖಂಡರುಗಳ ಹಾಜರಿದ್ದರು.