ಚಾಮರಾಜನಗರ: ಶ್ರೀಲಂಕಾ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ನಿವೃತ್ತಿಯ ಬಳಿಕ ಉದ್ಯಮದತ್ತ ಮುಖ ಮಾಡಿದ್ದು, ಸ್ವದೇಶದಲ್ಲಿ ಆರಂಭಿಸಿದ್ದ ತಂಪು ಪಾನೀಯ ತಯಾರಿಕಾ ಉದ್ಯಮವನ್ನು ಈಗ ಚಾಮರಾಜನಗರ ಬದನಗುಪ್ಪೆಗೂ ವಿಸ್ತರಿಸಿದ್ದಾರೆ.
ಈ ಕುರಿತು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿದ ಮುರಳೀಧರನ್ ತಮ್ಮ ಯೋಜನೆ ಕುರಿತು ಚರ್ಚಿಸಿದ್ದಾರೆ.
‘ಮುತ್ತಯ್ಯ ಬೆವರೇಜಸ್ ಅಂಡ್ ಕನ್ಫೆಕ್ಷನರಿ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯಡಿಯಲ್ಲಿ ಮುತ್ತಯ್ಯ ಮುರಳೀಧರನ್ ಬದನಗುಪ್ಪೆಯಲ್ಲಿ 1400 ಕೋಟಿ ರೂಪಾಯಿಗಳ ಹೂಡಿಕೆ ಮಾಡಲು ಮುಂದಾಗಿದ್ದಾರೆ.
ಆರಂಭದಲ್ಲಿ 250 ಕೋಟಿ ರೂಪಾಯಿಗಳ ಹೂಡಿಕೆ ಮಾಡಲು ಮುರಳೀಧರನ್ ನಿರ್ಧರಿಸಿದ್ದರು. ಆದರೆ ಈಗಾಗಲೇ ಮೊತ್ತ 1000 ಕೋಟಿ ಮುಟ್ಟಿದ್ದು, ಮುಂದಿನ ದಿನಗಳಲ್ಲಿ 1400 ಕೋಟಿ ನಿರೀಕ್ಷೆಗಳಿವೆ ಎಂದು ತಿಳಿಸಲಾಗಿದೆ.
ಎಂಬಿ ಪಾಟೀಲ್ ಎಕ್ಸ್ ಪೋಸ್ಟ್ ಹೀಗಿದೆ: ವಿಶ್ವವಿಖ್ಯಾತ ಸ್ಪಿನ್ ಬೌಲರ್ ಶ್ರೀಲಂಕಾದ ಶ್ರೀ ಮುತ್ತಯ್ಯ ಮುರಳೀಧರನ್ ತಮ್ಮ ಕ್ರಿಕೆಟ್ ನಿವೃತ್ತಿ ಬಳಿಕ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ತಮ್ಮ ದೇಶದಲ್ಲಿ ತಂಪು ಪಾನೀಯ ಉತ್ಪಾದನಾ ಘಟಕವನ್ನು ಹೊಂದಿದ್ದಾರೆ. ತಮ್ಮ ವಹಿವಾಟನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ನಮ್ಮ ರಾಜ್ಯವನ್ನು ಆಯ್ಕೆಮಾಡಿಕೊಂಡಿರುವುದು ಸಂತಸದ ಸಂಗತಿ.
ಚಾಮರಾಜನಗರ ಜಿಲ್ಲೆಯಲ್ಲಿ ಉತ್ಪಾದನಾ ಘಟಕ ಸ್ಥಾಪಿಸುತ್ತಿದ್ದು, ಆರಂಭದಲ್ಲಿ ರೂ. 250 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದ್ದರು, ಆದರೆ ರೂ. 1,000 ಕೋಟಿ ಮುಟ್ಟತ್ತಿದೆ. ಮುಂದಿನ ದಿನಗಳಲ್ಲಿ ರೂ. 1,400 ಕೋಟಿ ತಲುಪುವ ನಿರೀಕ್ಷೆಗಳಿವೆ. ಇದೇ ಸಂದರ್ಭದಲ್ಲಿ ಧಾರವಾಡದಲ್ಲಿ ಘಟಕ ಸ್ಥಾಪನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಉತ್ತರಿಸಿದರು. ಸಣ್ಣ ಪುಟ್ಟ ಸಮನ್ವಯಕ್ಕೆ ಸಂಬಂಧಿಸಿದಂತೆ ಈದಿನ ಚರ್ಚೆಗಳು ನಡೆಯಿತು. ಅಗತ್ಯದ ನೆರವು ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವೆ.