ಚಾಮರಾಜನಗರ: ರಾಜ್ಯದಲ್ಲಿ ಆನ್ಲೈನ್ ಜೂಜಾಟವನ್ನು ಸಂಪೂರ್ಣ ನಿಷೇಧಿಸಿ ಆದೇಶ ಜಾರಿಗೊಳಿಸಬೇಕು ಎಂದು ರಾಜ್ಯ ರೈತ ಸಂಘ, ಹಸಿರುಸೇನೆಯ ಹೆಗ್ಗವಾಡಿಪುರ ಮಹೇಶ್ ಕುಮಾರ್ ಒತ್ತಾಯಿಸಿದರು.
ಆನ್ಲೈನ್ ರಮ್ಮಿಯಂಥ ಜೂಜಾಟ ನಿಷೇಧ ಕುರಿತು ಆಯಾ ರಾಜ್ಯ ಸರ್ಕಾರಗಳೇ ತೀರ್ಮಾನ ತೆಗೆದುಕೊಳ್ಳುವ ಕುರಿತು ಕೇಂದ್ರ ಸರ್ಕಾರ ಸಂಸತ್ನಲ್ಲಿ ತಿಳಿಸಿದೆ. ಹಾಗಾಗಿ ಆನ್ಲೈನ್ ಜೂಜಾಟ ಆಪ್ ಸಂಬಂಧ ಸೆಕ್ಷನ್ ೧೧೨ರ ಅಡಿಯಲ್ಲಿ ಪ್ರಕರಣ ದಾಖಲಿಸುವ ಮೂಲಕ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಆನ್ಲೈನ್ ಜೂಜಾಟ ಆಡಲು ಪ್ರಚೋದನೆ ನೀಡುವವರ ವಿರುದ್ಧವೂ ಎಫ್ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶನ ಹೊರಡಿಸಬೇಕು. ಆನ್ಲೈನ್ ಜೂಜಾಟ ನಿಷೇಧ ಆದೇಶ ಹೊರಡಿಸದಿದ್ದರೆ ಮಾ.೨೮ ರಂದು ಚಾ.ನಗರದ ಜಿಲ್ಲಾಡಳಿತ ಭವನ, ಎಸ್ಪಿ ಕಚೇರಿ, ಪೊಲೀಸ್ ಠಾಣೆಗಳ ಮುಂದೆ ಇಸ್ಪೀಟ್ ಆಡಿಸುವುದಾಗಿ ಎಚ್ಚರಿಕೆ ನೀಡಿ ಗಡವು ನೀಡಿದ್ದೆವು ಎಂದರು.
ಆದರೆ, ಕೇಂದ್ರ ಸರ್ಕಾರ ಆಯಾ ರಾಜ್ಯಗಳಿಗೆ ನಿಷೇಧದ ವಿವೇಚನೆಯ ನಿರ್ಧಾರಕ್ಕೆ ಸೂಚನೆ ನೀಡಿರುವುದರಿಂದ ಆದೇಶ ನೀಡಿರುವುದರಿಂದ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಮುಂದೂಡಲಾಗಿದೆ. ಒಂದು ವೇಳೆ ರಾಜ್ಯ ಸರ್ಕಾರ ಆನ್ಲೈನ್ ಜೂಜಾಟದ ವಿರುದ್ಧ ಕ್ರಮ ವಹಿಸದಿದ್ದರೆ, ಏ.೬ ರಂದು ರೈತ ಸಂಘ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಗೋಷ್ಠಿಯಲ್ಲಿ ರೈತ ಮುಖಂಡರಾದ ಮಹೇಶ್, ಮಹಾದೇವಸ್ವಾಮಿ ಹಾಜರಿದ್ದರು.