Mysore
19
clear sky

Social Media

ಭಾನುವಾರ, 01 ಮಾರ್ಚ್ 2026
Light
Dark

ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ: ಅಜ್ಜೀಪುರ ಗ್ರಾಮದಿಂದ ವಿಧಾನಸೌಧದವರೆಗೆ ಪಾದಯಾತ್ರೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು 

ಹನೂರು: ತಾಲೂಕಿನ ಕುಡಿಯುವ ನೀರಿನ ದಾಹ ಇಂಗಿಸಲು ಕೆರೆಕಟ್ಟೆಗಳು, ಜನಜಾನುವಾರುಗಳಿಗೆ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ಪಾದಯಾತ್ರೆಯ ಮೂಲಕ ನಾವು ಯಶಸ್ಸನ್ನು ಕಾಣಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಅಜ್ಜೀಪುರ ಗ್ರಾಮದಿಂದ ವಿಧಾನಸೌಧದವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದಲ್ಲಿ ರಾಜಕೀಯ ನಾಯಕತ್ವ ಬಲಿಷ್ಠವಾಗಿದ್ದರೆ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವ ಯೋಜನೆಗಳನ್ನಾದರೂ ಅನುಷ್ಠಾನ ಮಾಡಬಹುದು. ಆದರೆ ಹನೂರು ತಾಲೂಕಿನ ಜನಪ್ರತಿನಿಧಿಗಳು ನೀರಾವರಿ ಯೋಜನೆಗಳಿಗೆ ಅನುದಾನ ತರಲು ಶಕ್ತಿ ಹೀನರಾಗಿದ್ದಾರೆ. ಈ ನಿಟ್ಟಿನಲ್ಲಿ ಜನಾಂದೋಲನದ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಯು ಯಶಸ್ವಿಯಾಗಿ ನಮ್ಮ ಭಾಗದ ನೀರಾವರಿ ಯೋಜನೆಗೆ ಸರ್ಕಾರ ಅನುದಾನ ನೀಡುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ಹನೂರು ಭಾಗದ ನೀರಾವರಿ ಯೋಜನೆಗೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯಲಾಗಿದೆ. ಅವರು ಸಹ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಆದರೂ ನಮ್ಮ ಯೋಜನೆ ಅನುಷ್ಠಾನ ಆಗುವವರೆಗೂ ನಾವು ಹೋರಾಟ ನಡೆಸಬೇಕು ಎಂದು ತಿಳಿಸಿದರು.

ಪಾದಯಾತ್ರೆ ಹೋಗುತ್ತಿರುವ ರೈತ ಸಂಘದ ಸದಸ್ಯರಿಗೆ ಮಂಡ್ಯ, ರಾಮನಗರ ಜಿಲ್ಲೆಯ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಊಟ ಹಾಗೂ ವಾಸ್ತವ್ಯಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಆ ಭಾಗದ ರೈತರು ಸಹ ನಿಮ್ಮ ಪಾದಯಾತ್ರೆಗೆ ಶಕ್ತಿ ತುಂಬಲಿದ್ದಾರೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ ಹನೂರು ತಾಲ್ಲೂಕಿನ ಉಡುತೊರೆ ಹಳ್ಳ ಜಲಾಶಯಕ್ಕೆ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ ಯೋಜನೆಯ 491 ಕೋಟಿ ವೆಚ್ಚದ ಡಿ.ಪಿ.ಅರ್ ಗೆ ಅನುಮೋದನೆ ದೊರಕಿದೆ. ಮಾರ್ಚ್ 6 ರಂದು ಮುಖ್ಯಮಂತ್ರಿಗಳು ಮಂಡಿಸಲಿರುವ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಇದರಿಂದ ತಾಲೂಕಿನ ಮಣಗಳ್ಳಿ, ಬಂಡಳ್ಳಿ ಹಲಗಾಪುರ, ಮಾರ್ಟಳ್ಳಿ ಗ್ರಾಮದ ಕಿರೆಪಾತಿ, ಹಾಲೇರಿಕೆರೆಗೆ ನೀರು ತುಂಬಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗಿ ಕುಡಿಯುವ ನೀರು ಹಾಗೂ ಜನಜಾನುವಾರುಗಳಿಗೆ ಅನುಕೂಲವಾಗಲಿದೆ, ರೈತರು ಗುಳೆ ಹೋಗುವುದು ತಪ್ಪಲಿದೆ ಎಂದರು.

ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ, ಜಂಬೂಕಾಂಪಟ್ಟಿ, ಮಾರಿಕೋಟೆ, ಪುದುಕಾಡು ಸೇರಿದಂತೆ ಹಲವು ಗ್ರಾಮಗಳ ಪಾರಂಪರಿಕ ಅರಣ್ಯ ವಾಸಿಗಳಿಗೆ ವಿದ್ಯುತ್, ಕುಡಿಯುವ ನೀರು ಸುಸಜ್ಜಿತ ರಸ್ತೆ ಹಾಗೂ ಹಲವಾರು ವರ್ಷಗಳಿಂದ ನೆಲೆಸಿರುವ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು ಎಂಬುದನ್ನು ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಒಂದೊಮ್ಮೆ ಮಾರ್ಗ ಮಧ್ಯದಲ್ಲಿ ಸಂಬಂಧಪಟ್ಟ ಸಚಿವರು ನಮ್ಮ ಮನವಿಯನ್ನು ಈಡೇರಿಸುವುದಾಗಿ ಭರವಸೆ ನೀಡಿದರೆ ಪಾದಯಾತ್ರೆ ಕೈ ಬಿಡಲಾಗುವುದು. ಇಲ್ಲದಿದ್ದರೆ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.

ಫೆಬ್ರವರಿ.25ರಿಂದ ಪಾದಯಾತ್ರೆ ಹೊರಟು ಮಾರ್ಚ್ ೬ರಂದು ಬೆಂಗಳೂರಿನ ವಿಧಾನಸೌಧ ತಲುಪಲಿದೆ. ಕುಡಿಯುವ ನೀರು ಪ್ರತಿಯೊಬ್ಬರಿಗೂ ಅವಶ್ಯಕತೆ ಇರುವುದರಿಂದ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರಲ್ಲದೆ ಸಾರ್ವಜನಿಕರು ಸಹ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯ ವೇಳೆ ಮಹಿಳಾ ಸದಸ್ಯರು ಖಾಲಿ ಬಿಂದಿಗೆ ತಲೆ ಮೇಲೆ ಇಟ್ಟು ಸರ್ಕಾರ ಹಾಗೂ ಜನಪ್ರತಿನಿಧಿಗಳ ಮೇಲೆ ಆಕ್ರೋಶ ಹೊರಹಾಕಿದರು.

ಉರುಳುಸೇವೆ ಮಾಡಿದ ಮಹೇಶ್ ಕುಮಾರ್: ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಮುಖ ಜಲಾಶಯ ಹಾಗೂ ಕೆರೆಕಟ್ಟೆಗಳಿಗೆ ನೀರು ತುಂಬಿಸುವ 491 ಕೋಟಿ ವೆಚ್ಚದ ಡಿ.ಪಿ.ಆರ್‌ಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಕಾಯಂ ಸದಸ್ಯ ಮಹೇಶ್ ಕುಮಾರ್ ಉರುಳು ಸೇವೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಕೆಂಪೇಗೌಡ, ಕಾರ್ಯಧ್ಯಕ್ಷ ಮಹೇಶ್ ಪ್ರಭು, ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ಲೋಕೇಶ್ ಗೌಡ ಸಂಘಟನಾ ಕಾರ್ಯದರ್ಶಿ ಪ್ರಸಾದ್, ಕಾಯಂ ಸದಸ್ಯರಾದ ಮಹೇಶ್ ಕುಮಾರ್, ಹೆಬ್ಸೂರು ಬಸವಣ್ಣ ವಿಭಾಗಿಯ ಕಾರ್ಯಾಧ್ಯಕ್ಷ ಹೊಸಕೋಟೆ ಬಸವರಾಜು, ತಾಲೂಕು ಮಹಿಳಾ ಘಟಕದ ಅಧ್ಯಕ್ಷ ರಾಜಮಣಿ, ಗೌರವಾಧ್ಯಕ್ಷ ರಾಜಣ್ಣ ಉಪಾಧ್ಯಕ್ಷ ಪಳನಿ ಸ್ವಾಮಿ, ಗ್ರಾಮ ಘಟಕದ ಅಧ್ಯಕ್ಷ ವೆಂಕಟೇಶ್ ಶಕ್ತಿವೇಲ್ ಸೇರಿದಂತೆ ನೂರಾರು ರೈತ ಸಂಘದ ಮುಖಂಡರು ಪಾಲ್ಗೊಂಡಿದ್ದರು.

Tags:
error: Content is protected !!