ಚಾಮರಾಜನಗರ: ಮದುವೆ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿದ್ದವರ ಕಾರು ಮರಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಇಬ್ಬರು ಯುವಕರು ಸಾವಿಗೀಡಾಗಿರುವ ಘಟನೆ ಭಾನುವಾರ ಮಧ್ಯರಾತ್ರಿ (1.ಗಂಟೆ) ಚಾಮರಾಜನಗರ ತಾಲೂಕಿನ ಪುಣಜನೂರು ಬಳಿ ನಡೆದಿದೆ.
ಮೈಸೂರಿನ ರಮಾಬಾಯಿ ನಗರದ ಜೀವನ್ ಹಾಗೂ ನಂದನ್ (ಇಬ್ಬರಿಗೂ 24 ವರ್ಷ) ಸ್ಥಳ ದಲ್ಲೇ ಮೃತಪಟ್ಟಿದ್ದಾರೆ.
ಉಳಿದಂತೆ ರಮಾಬಾಯಿನಗರದ ಶಶಾಂಕ್, ವಿದ್ಯಾರಣ್ಯಪುರಂನ ಧನುಷ್, ಗುಂಡ್ಲುಪೇಟೆಯ ಸುನೀಲ್ ಕುಮಾರ್ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರೆಲ್ಲ ಚಾಮರಾಜನಗರ ತಾಲೂಕಿನ ಬೆಜ್ಜಲಪಾಳ್ಯದಲ್ಲಿ ಇಂದು ನಡೆಯುತ್ತಿದ್ದ ಮದುವೆಗೆ ಮೈಸೂರಿನಿಂದ ಆಗಮಿಸಿದ್ದರು. ತಡ ರಾತ್ರಿ ಮದುವೆ ಮನೆಯಿಂದ ಪುಣಜನೂರಿಗೆ ತೆರಳಿ, ವಾಪಸ್ ಮದುವೆ ಮನೆಗೆ ಬರುವಾಗ ಅಪಘಾತ ನಡೆದಿದೆ.
ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಸ್ಪಿ ಡಾ. ಬಿ ಟಿ ಕವಿತಾ, ಎಎಸ್ಪಿ ಶಶಿಧರ್, ಡಿಎಸ್ಪಿ ಲಕ್ಷ್ಮಯ್ಯ, ಇನ್ಸ್ ಪೆಕ್ಟರ್ ನವೀನ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.