Mysore
14
broken clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಚಾಮರಾಜನಗರ: ಪೊಲೀಸರಿಂದ ತಪ್ಪಿಸಕೊಂಡಿದ್ದ ವಿಚಾರಣಾ ಖೈದಿ ಬಂಧನ

ಚಾಮರಾಜನಗರ : ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾಗ ತಪ್ಪಿಸಿಕೊಂಡಿದ್ದ ವಿಚಾರಣಾ ಕೈದಿ ಮಹಿಳೆಯರ ಪರ್ಸ್ ಕದಿಯಲು ಹೋಗಿ ಸಿಕ್ಕಿ ಬಿದ್ದಿರುವ ಘಟನೆ ಚಾಮರಾಜನಗರ ಸಮೀಪದ ಕೌಲಂದೆ ರೈಲ್ವೆ ನಿಲ್ದಾಣದಲ್ಲಿ ವರದಿಯಾಗಿದೆ.

ಚಾಮರಾಜನಗರ ತಾಲೂಕಿನ ಸುರೇಶ್(30) ಪೊಲೀಸರ ಕೈಗೆ ಸಿಕ್ಕಿಬಿದ್ದ ವಿಚಾರಣಾ ಕೈದಿಯಾಗಿದ್ದು, ತಪ್ಪಿಸಿಕೊಂಡ 24 ತಾಸಲ್ಲೇ ಮತ್ತೆ ಪೊಲೀಸರಿಗೆ ಬಲೆಗೆ ಬಿದ್ದಿದ್ದಾನೆ.

ಘಟನೆ ವಿವರ : ಕೆಲ ದಿನಗಳ ಹಿಂದೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಸುರೇಶ್​​ ​ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ತಮಿಳುನಾಡು ಸತ್ಯಮಂಗಲಂನ ನ್ಯಾಯಾಲಯಕ್ಕೆ ಶುಕ್ರವಾರ ವಿಚಾರಣೆಗೆ ಕರೆದೊಯ್ಯುವಾಗ ಹಾಸನೂರಿನ ಹೋಟೆಲ್​ ಬಳಿ ಪೊಲೀಸರನ್ನು ನೂಕಿ ಪರಾರಿಯಾಗಿದ್ದನು. ಆ ವೇಳೆ, ಪೊಲೀಸ್ ಸಿಬ್ಬಂದಿಗಳಾದ ಶಿವಾಜಿ ಅವರ ಕಿರುಬೆರಳು ಮುರಿದು, ಕಾಲುಗಳಿಗೆ ಗಾಯವಾಗಿತ್ತು. ವೀರಭದ್ರ ಎಂಬವರಿಗೆ ತರಚಿದ ಗಾಯಗಳಾಗಿತ್ತು. ಪೊಲೀಸರಿಂದ ತಪ್ಪಿಸಿಕೊಂಡ ಈತ ಪೊದೆಗಳ ಒಳಕ್ಕೆ ನುಗ್ಗಿ ಕಣ್ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.

ರೈಲಿನಲ್ಲಿ ಬಲೆಗೆ ಬಿದ್ದ ಕೈದಿ : ಕೈಗೆ ಹಾಕಲಾಗಿದ್ದ ಬೇಡಿಯನ್ನು ಕಲ್ಲಿನಿಂದ ಜಜ್ಜಿಕೊಂಡು ಬೇಡಿ ಕಳಚಿಕೊಂಡು, ಹಾಕಿದ್ದ ಬಿಳಿ ಬಟ್ಟೆಯನ್ನು ಕಳಚಿ ಚಾಮರಾಜನಗರಕ್ಕೆ ಬಂದಿದ್ದಾನೆ ಎನ್ನಲಾಗಿದೆ.

ಚಾಮರಾಜನಗರದಿಂದ ನಂಜನಗೂಡಿಗೆ ನಿನ್ನೆ ರಾತ್ರಿ ರೈಲಿನಲ್ಲಿ ಹೋಗಿದ್ದ ಈತ, ಇಂದು ನಂಜನಗೂಡಿನಿಂದ ವಾಪಸ್ ಚಾಮರಾಜನಗರಕ್ಕೆ ಬರುವಾಗ ಮಹಿಳಾ ಬೋಗಿಯನ್ನು ಏರಿ ಪರ್ಸ್ ಕದಿಯಲು ಯತ್ನಿಸಿದಾಗ ಅಲ್ಲೇ ಇದ್ದ ಸಹ ಪ್ರಯಾಣಿಕರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ನಾಪತ್ತೆಯಾಗಿದ್ದ ಕೈದಿಯ ಪ್ರಕರಣ ಸುಖಾಂತ್ಯಗೊಂಡಿದ್ದು, ಚಾಮರಾಜನಗರ ಗ್ರಾಮಾಂತರ ಠಾಣಾ ಪೊಲೀಸರು ಸುರೇಶ್​ನ ಆರೋಗ್ಯ ತಪಾಸಣೆಗೊಳಿಸಿ ಸತ್ಯಮಂಗಲಂ ನ್ಯಾಯಾಲಯ ವಶಕ್ಕೆ ಕೊಡಲು ತೆರಳಿದ್ದಾರೆ.

ಇಬ್ಬರು ಪೊಲೀಸರಿಗೆ ಅಮಾನತು ಶಿಕ್ಷೆ : ವಿಚಾರಣಾ ಕೈದಿ ತಪ್ಪಿಸಿಕೊಂಡಿದ್ದ ಹಿನ್ನೆಲೆ ಮೀಸಲು ಪಡೆಯ ವೀರಭದ್ರ ಹಾಗೂ ಶಿವಾಜಿ ಎಂಬವರನ್ನು ಅಮಾನತುಗೊಳಿಸಿ ಚಾಮರಾಜನಗರ ಎಸ್ಪಿ ಆದೇಶ ಹೊರಡಿಸಿದ್ದಾರೆ. ಕರ್ತವ್ಯಲೋಪ ಹಿನ್ನೆಲೆ ಇಬ್ಬರ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಸೂಚಿಸಿದ್ದಾರೆ.

ಆರೋಪಿತನ ವಿರುದ್ಧ ದಾಖಲಾಗಿರುವ ಪ್ರಕರಣಗಳು : ಬಂಧಿತ ಆರೋಪಿ ದೇವಾಲಯ ಹುಂಡಿ ಕಳವು, ದರೋಡೆ ಸೇರಿದಂತೆ ಚಾಮರಾಜನಗರ ಗ್ರಾಮಾಂತರ ಠಾಣೆ, ಪೂರ್ವ ಠಾಣೆ ವ್ಯಾಪ್ತಿಯಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಅದೇ ರೀತಿ, ತಮಿಳುನಾಡಿನ ಈರೋಡ್ ಜಿಲ್ಲಾ ವ್ಯಾಪ್ತಿಯಲ್ಲೂ ಈತನ ವಿರುದ್ಧ ಕಳವು ಪ್ರಕರಣಗಳು ದಾಖಲಾಗಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!