ಚಾಮರಾಜನಗರ : ತಾಲ್ಲೂಕಿನ ದೊಳ್ಳೀಪುರ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ಗೃಹಿಣಿಯನ್ನು ಆಯುಧದಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದ್ದು ಸೋಮವಾರ ಬೆಳಗಿನ ಜಾವ ವಿಚಾರ ಗೊತ್ತಾಗಿದೆ. ಆಕೆಯ ಗಂಡನೇ ಕೊಲೆಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಶೋಭಾ ಬಿ.ಆರ್. ಕೊಲೆಗೀಡಾದವರು. ತಲೆ, ಮುಖದ ಭಾಗಕ್ಕೆ ಆಯುಧದಿಂದ ಬಲವಾಗಿ ಹೊಡೆಯಲಾಗಿದೆ. ಶೋಭಾ ಅವರನ್ನು ಆಕೆಯ ಪತಿ ಮಹೇಶ (೪೫) ಕೊಲೆ ಮಾಡಿರುವುದಾಗಿ ಮೃತರ ಕಡೆಯವರು ಶಂಕೆ ವ್ಯಕ್ತಪಡಿಸಿದ್ದಾರೆ.
ಶೋಭಾ ಮೂಲತಃ ಬೆಂಗಳೂರಿನವರು. ಮಹೇಶ ಮತ್ತು ಅವನ ತಾಯಿ ಭಾರತಿ ಸೇರಿ ಕೊಲೆ ಮಾಡಿರುವ ಅನುಮಾನದ ಮೇಲೆ ಠಾಣೆಗೆ ದೂರು ನೀಡಿದ್ದಾರೆ.
ಶೋಭಾ ಕೊಲೆಯಾಗಿದೆ ಎಂದು ಮಹೇಶನೇ ಬೆಳಿಗ್ಗೆ ಕರೆ ಮಾಡಿ ತಿಳಿಸಿದ. ಅವನು ಸಾಲ ಮಾಡಿಕೊಂಡಿದ್ದ. ತವರು ಮನೆಯಿಂದ ಹಣ ತರುವಂತೆ ಪದೇ ಪದೇ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪೂರ್ವ ಠಾಣೆ ಪೊಲೀಸರು ಮಹೇಶ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ. ಮೃತರಿಗೆ ೧೬ವರ್ಷದ ಮಗ ಇದ್ದಾನೆ. ಅವನು ಹೊರ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿದ ನಂತರ ಮೃತರ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.
ಘಟನಾ ಸ್ಥಳಕ್ಕೆ ಎಸ್ಪಿ ಡಾ.ಕವಿತಾ, ಎಎಸ್ಪಿ ಶಶಿಧರ್, ಡಿವೈಎಸ್ಪಿ ಲಕ್ಷ್ಮಯ್ಯ, ಇನ್ಸ್ ಪೆಕ್ಟರ್ ನವೀನ್, ಎಎಸ್ಐ ಮಹದೇವು ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು. ಘಟನೆ ಸಂಬಂಧ ವಿಚಾರಣೆ ಮುಂದುವರಿದಿದೆ.





