ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರ ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವಂತೆಯೇ ವಿರೋಧ ಪಕ್ಷಗಳು ಪರಸ್ಪರ ಕೆಸರೆರೆಚಾಟಕ್ಕೆ ಮುಂದಾಗಿವೆ. ಅದರಲ್ಲಿಯೂ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಪೋಸ್ಟರ್ ವಾರ್ ಎಲ್ಲೆಡೆ ಸದ್ದು ಮಾಡುತ್ತಿದೆ.
ಏ.೪ ರಂದು ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡುವ ದಿನ ಚಾಮರಾಜನಗರದ ಬೀದಿ-ಬೀದಿಗಳಲ್ಲಿ ಮರಳು ಮಾಫಿಯಾದ ಅನಭಿಷಿಕ್ತ ದೊರೆ ಸುನೀಲ್ ಬೋಸ್, ಗೋ ಬ್ಯಾಕ್ ಸುನೀಲ್ ಬೋಸ್ ಎಂಬ ಪೋಸ್ಟರ್ ಅಂಟಿಸಲಾಗಿತ್ತು. ಈ ಕಾವು ತಣ್ಣಗಾಗುವ ಮುನ್ನವೇ ಬಿಜೆಪಿ ಹಿರಿಯ ಸಂಸದ ವಿ.ಶ್ರೀನಿವಾಸ್ ಪ್ರಸಾದ್ಅವರನ್ನು ನಿಂದಿಸಿರುವ ಪೋಸ್ಟರ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪೋಸ್ಟರ್ನಲ್ಲಿ ‘ಶ್ರೀನಿವಾಸ್ ಪ್ರಸಾದ್ ಅರೆ ಹುಚ್ಚ, ರಾಜಕೀಯ ಬಿಟ್ಟು ಮನೆಯಲ್ಲಿರಲಿ ಎಂದು ಬರೆಯಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನಲೆ ಪ್ರಸಾದ್ ವಿರುದ್ಧ ಬಿಜೆಪಿಯ ಬಾಲರಾಜ್ ಅವರು ಪೋಸ್ಟರ್ ಹಾಕಿದ್ದಾರೆಂಬ ಆರೋಪ ಕೇಳಿಬಂದಿದ್ದು, ಪೋಸ್ಟ್ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಚಾಮರಾಜನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಬಿಜೆಪಿಯಿಂದ ದೂರು ಸಲ್ಲಿಸಲಾಗಿದೆ.
ಈ ವಿಚಾರವಾಗಿ ಹನೂರು ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಚಾಮರಾಜನಗರ ಲೋಕಸಭಾ ಅಭ್ಯರ್ಥಿ ಎಸ್. ಬಾಲರಾಜು, ‘ಸುಳ್ಳು ಆರೋಪ ಮಾಡಿದವರಿಗೆ ಮಾದಪ್ಪನೇ ತಕ್ಕ ಶಾಸ್ತಿ ಮಾಡಲಿ, ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಮೇಲೆ ನನಗೆ ತುಂಬಾ ಗೌರವವಿದೆʼ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನೀಡಿದ ದೂರಿನಲ್ಲೇನಿದೆ?
ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಎಸ್.ಬಾಲರಾಜ್, ಸಂಸದ ವಿ.ಶ್ರೀನಿವಾಸ ಪ್ರಸಾದ್ ಉತ್ತಮ ಸಂಬಂಧವನ್ನು ಹೊಂದಿದ್ದು ಇದನ್ನು ಸಹಿಸದ ಕಿಡಿಗೇಡಿಗಳಾದ ನವಾಜ್, ರವಿ ಅವರು ಸುನೀಲ್ ಬೋಸ್ ಅಭಿಮಾನಿ ಬಳಗದ ವ್ಯಾಟ್ಸಾಪ್ ಗ್ರೂಪ್ ನಲ್ಲಿ ಎಸ್.ಬಾಲರಾಜ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.