ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ತಾಲ್ಲೂಕಿನ ಮೂಗೆಗೌಡದೊಡ್ಡಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಜೋಳದ ಮೆದೆ ಸಂಪೂರ್ಣವಾಗಿ ಭಸ್ಮವಾದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ತಾಲ್ಲೂಕಿನ ಶೆಟ್ಟಳ್ಳಿ ಸಮೀಪದ ಮೂಗೆಗೌಡದೊಡ್ಡಿ ಗ್ರಾಮದಲ್ಲಿ ಶಾಂತ ಎಂಬ ರೈತನಿಗೆ ಸೇರಿದ ಜೋಳದ ಮೆದೆ ಏಕಾಏಕಿ ಧಗೆದಗೆನೆ ಹೊತ್ತಿ ಉರಿಯತೊಡಗಿತು. ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಿ ಮೆದೆ ಸಂಪೂರ್ಣ ಸುಟ್ಟು ಕರಕಲಾಯಿತು.
ಘಟನೆಯನ್ನು ಗಮನಿಸಿದ ಗ್ರಾಮಸ್ಥರು ತಕ್ಷಣವೇ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ನೀರು ಹಾಗೂ ಲಭ್ಯವಿದ್ದ ಇತರೆ ಸಾಧನಗಳ ಸಹಾಯದಿಂದ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಆದರೂ, ಆಗಲೇ ಹೆಚ್ಚಿನ ಭಾಗ ಸುಟ್ಟು ನಷ್ಟ ಉಂಟಾಯಿತು. ಬೆಂಕಿ ಕಾಣಿಸಿಕೊಂಡ ಕಾರಣ ತಿಳಿದುಬಂದಿಲ್ಲ. ಘಟನೆಯಿಂದ ಶಾಂತ ಅವರಿಗೆ ಆರ್ಥಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ನಷ್ಟದಲ್ಲಿ ರೈತ: ಬೇಸಿಗೆ ಕಾಲ ಆರಂಭಕ್ಕೂ ಮುನ್ನ ಹಸುಗಳಿಗೆ ಸಂಗ್ರಹಣೆ ಮಾಡಿದ್ದ ಮೇವಿನ ಮೆದೆ ಸಂಪೂರ್ಣ ಸುಟ್ಟು ಹೋಗಿದ್ದು, ಇದರಿಂದ ರೈತ ಶಾಂತ ಅವರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮವಹಿಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.





