Mysore
25
clear sky

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ಅಧಿಕಾರಿಗಳ ಗೈರು: ಮುಖಂಡರ ಆಕ್ರೋಶ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು 

ಗುಂಡ್ಲುಪೇಟೆ: ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಯೊಜಿಸಿದ್ದ ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಹಾದಿಯಾಗಿ ಸರಿಯಾದ ಸಮಯಕ್ಕೆ ಅಧಿಕಾರಿಗಳು ಬಾರದ ಹಿನ್ನಲೆ ಸವಿತ ಸಮಾಜದ ಮುಖಂಡರು ಕಾರ್ಯಕ್ರಮ ಬಹಿಷ್ಕರಿಸಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಗುಂಡ್ಲುಪೇಟೆ ವತಿಯಿಂದ ಶ್ರೀಸವಿತಾ ಮಹರ್ಷಿ ಜಯಂತಿ ಆಚರಣಾ ಸಮಾರಂಭವನ್ನು ನಿಗದಿಗೊಳಿಸಲಾಗಿತ್ತು. ಆದರೆ ತಾಲ್ಲೂಕಿನ ಬಹುತೇಕ ಇಲಾಖೆಯ ಅಧಿಕಾರಿಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ ಕಾರ್ಯಕ್ರಮದಿಂದ ಹೊರ ನಡೆದು ತಾಲ್ಲೂಕು ಕಚೇರಿಯ ಮುಂಭಾಗ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಸವಿತಾ ಸಮಾಜದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪರಶಿವಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಸವಿತಾ ಸಮಾಜದವರ ಕಾರ್ಯಕ್ರಮವಾದ, ಸವಿತಾ ಮಹರ್ಷಿ ಜಯಂತಿಗೆ ತಾಪಂ ಇಓ ಹೊರತುಪಡಿಸಿ ಎಲ್ಲಾ ಇಲಾಖೆ ಅಧಿಕಾರಿಗಳು ಗೈರಾಗಿದ್ದಾರೆ, ಈ ಮೂಲಕ ಸಮಾಜವನ್ನು ಕಡೆಗಣಿಸಲಾಗಿದೆ ಎಂದು ಕಿಡಿಕಾರಿದರು.

ಅಧಿಕಾರಿಗಳು ಸವಿತಾ ಸಮಾಜದವರ ಮೇಲೆ ತಾತ್ಸಾರ ಮನೋಭಾವನೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮಹರ್ಷಿ ಜಯಂತಿಗೆ ಗೈರಾಗಿ ಅಗೌರವ ತೋರಿರುವುದು ಖಂಡನೀಯ. ಶೀಘ್ರದಲ್ಲೇ ತಾಲ್ಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ಸವಿತಾ ಮಹರ್ಷಿ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ವಿಠಲ್, ಉಪಾಧ್ಯಕ್ಷ ರಾಜು, ಹಂಗಳ ಹೋಬಳಿ ಅಧ್ಯಕ್ಷ ಸಿದ್ದಪ್ಪ, ತೆರಕಣಾಂಬಿ ಹೋಬಳಿ ಅಧ್ಯಕ್ಷ ಅಂಕಪ್ಪ, ಬೇಗೂರು ಹೋಬಳಿ ಅಧ್ಯಕ್ಷ ಸುರೇಶ್, ಕಸಬಾ ಹೋಬಳಿ ಅಧ್ಯಕ್ಷ ಮಹದೇವಶೆಟ್ಟಿ, ಮುಖಂಡರಾದ ರಾಜಣ್ಣ, ರವಿ, ಮಹದೇವಶೆಟ್ಟಿ, ಕೃಷ್ಣಪ್ಪ, ಗಣೇಶ್, ಸುರೇಶ್, ರಾಚ ಸೇರಿದಂತೆ ಸವಿತಾ ಸಮಾಜದ ಮುಖಂಡರು ಹಾಜರಿದ್ದರು.

Tags:
error: Content is protected !!