ಹನೂರು : ತಾಲೂಕಿನ ದೊಡ್ಡಲತ್ತೂರು ಗ್ರಾಮದ ಸರ್ಕಾರಿ ಜಮೀನು ವಿವಾದದಿಂದ ಮನನೊಂದು ಮಹಿಳೆಯೊಬ್ಬರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಅಧಿಕಾರಿಗಳ ದೌರ್ಜನ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ವಿವಾದ ಕೇಳದ ಜಮೀನಿನಲ್ಲಿಯೇ ಮೃತ ದೇಹವನ್ನು ತಂದು ಪ್ರತಿಭಟನೆ ನಡೆಸಿ ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಘಟನೆ ಹಿನ್ನಲೆ ; ಕೆಂಪಯ್ಯನಹಟ್ಟಿ ಗ್ರಾಮದ ನಿವಾಸಿಗಳು ಡಾ. ಬಿ ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ನಿವೇಶನ ಒದಗಿಸಿಕೊಡುವಂತೆ ತಹಸಿಲ್ದಾರ್ ರವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ದೊಡ್ಡಲತ್ತೂರು ಗ್ರಾಮದ ಸರ್ವೆ ನಂಬರ್ 80ರಲ್ಲಿ ಇರುವ ಮೂರು ಎಕರೆ 96 ನಿವೇಶನದ ಪೈಕಿ 20 ಸೆಂಟ್ ನಿವೇಶನವನ್ನು ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ ಮಂಜೂರು ಮಾಡಲಾಗಿತ್ತು. ಆದರೆ ಈ ಜಾಗದಲ್ಲಿ ಕೆಲವು ಗ್ರಾಮಸ್ಥರು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿದ್ದರು.
ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಗೆ ಅಕ್ರಮ ತೆರವು ಮಾಡಿಕೊಳ್ಳುವಂತೆ ದೂರು ಸಲ್ಲಿಕೆಯಾಗಿತ್ತು. ಆಗಸ್ಟ್ 6 ರಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಕಂದಾಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳೀಯರ ಜೊತೆಗೆ ನಿವೇಶನವನ್ನು ಸರ್ವೆ ಮಾಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಮೃತ ರಾಜಮ್ಮ ರವರ ಪತಿ ಸೋಮಣ್ಣ ಮರ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.
ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಸೋಮಣ್ಣರವರಿಗೆ ಸಮಾಧಾನಪಡಿಸಿ ಒತ್ತುವರಿ ಜಾಗವನ್ನು ಅಂಬೇಡ್ಕರ್ ಭವನಕ್ಕಾಗಿ ನಿಗದಿಪಡಿಸಿ ನಾಮಫಲಕವನ್ನು ಅಳವಡಿಸಿದ್ದರು. ಆಗಸ್ಟ೬ ರಂದು ಮೃತ ರಾಜಮ್ಮ ತಮ್ಮ ಜಮೀನಿನಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿ ಗೋಳಾಡಿದ್ದರು. ಇದೀಗ ಹಲವಾರು ವರ್ಷಗಳಿಂದ ಮಾಡಿಕೊಂಡ ಬಂದಿದ್ದ ಜಮೀನನ್ನು ನಮ್ಮಿಂದ ಕಿತ್ತುಕೊಂಡಿದ್ದಾರೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ದೊಡ್ಡಲತ್ತೂರು ಗ್ರಾಮದ ನಿವಾಸಿ ಶಂಕರಪ್ಪ ಮಾತನಾಡಿ, ಉಳ್ಳವರು ಸರ್ಕಾರದ ಏಕರಗಟ್ಟಲೆ ಜಮೀನನ್ನು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಪರವಾಗಿ ಸರ್ಕಾರ ಅಧಿಕಾರಿಗಳು ಬೆಂಬಲವಾಗಿದ್ದಾರೆ.
ತಲತಲಾಂತರದಿಂದ ವ್ಯವಸಾಯ ಮಾಡಿಕೊಂಡು ಬಂದಿರುವ ಜಮೀನನ್ನು ಅಧಿಕಾರಿಗಳು ಸರಿಯಾಗಿ ಸ್ಥಳ ಮಹಜರ್ ನಡೆಸದೆ ಸಮುದಾಯ ಭವನಕ್ಕೆ ಮಂಜೂರು ಮಾಡಿಕೊಟ್ಟಿದ್ದಾರೆ. ಮೃತಪಟ್ಟಿರುವ ರಾಜಮ್ಮ ರವರು ಕಡು ಬಡವರಾಗಿದ್ದು ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಅಧಿಕಾರಿಗಳ ನಿರ್ಲಕ್ಷದಿಂದ ಒಂದು ಕುಟುಂಬವನ್ನು ಇಂತಹ ಪರಿಸ್ಥಿತಿಗೆ ದೂಡಿರುವುದು ಎಷ್ಟರ ಮಟ್ಟಿಗೆ ಸರಿ. ಇವರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಲಿದೆ. ಮಾಧ್ಯಮದವರು ರೈತರ ಪರವಾಗಿ ನಿಲ್ಲಬೇಕು ಮೃತ ರಾಜಮ್ಮ ರವರಿಗೆ ಬೆಂಬಲವಾಗಿ ನಿಂತು ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ವರದಿ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.
ಇನ್ನು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡಾ. ಬಿಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆಯನ್ನು ನೀಡಿದ್ದಾರೆ. ಆದರೆ ಅವರು ಬೇರೆಯವರ ಜಮೀನನ್ನು ಕಿತ್ತು ಇನ್ನೊಬ್ಬರಿಗೆ ಕೊಡಿ ಎಂದು ಹೇಳಿಲ್ಲ, ಅಂಬೇಡ್ಕರ್ ಭವನ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಚಾರ ಆದರೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಒಬ್ಬರು ಮೃತಪಟ್ಟಿದ್ದಾರೆ ಎಂದರು.
ಶಾಸಕ ಎಂ ಆರ್ ಮಂಜುನಾಥ್ ಸಾಂತ್ವನ: ಉಳುಮೆ ಮಾಡುತ್ತಿದ್ದ ಜಮೀನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ರಾಜಮ್ಮ ರವರ ಕುಟುಂಬಕ್ಕೆ ಶಾಸಕ ಎಂ ಆರ್ ಮಂಜುನಾಥ್ ಭೇಟಿ ನೀಡಿ ಸಾಂತ್ವನ ತಿಳಿಸಿದರು. ಅಧಿಕಾರಿಗಳು ಬಂದು ಸರ್ವೆ ನಡೆಸಿದ ದಿನದಂದು ಮೃತ ರಾಜಮ್ಮ ರವರ ಪತಿ ಸೋಮಣ್ಣ ಮರ ಹೇರಿ ಆತ್ಮಹತ್ಯೆಗೆ ಯತ್ನಿಸಿದ ವಿಡಿಯೋವನ್ನು ಗ್ರಾಮಸ್ಥರೊಬ್ಬರು ಕಳುಹಿಸಿಕೊಟ್ಟಿದ್ದರು.
ನಾನು ವಿಧಾನಸಭೆ ಅಧಿವೇಶನದಲ್ಲಿ ಇದ್ದಿದ್ದರಿಂದ ಅವರಿಗೆ ಸಮಾಧಾನಪಡಿಸಿ ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದೆ. ಆದರೆ ಇಂತಹ ಘಟನೆ ನಡೆಯಬಾರದಾಗಿತ್ತು ಈಗಾಗಲೇ ನಡೆದು ಹೋಗಿದೆ.
ಸಮುದಾಯದವರು ಹಾಗೂ ಅಧಿಕಾರಿಗಳನ್ನು ಮನವೊಲಿಸುತ್ತೇನೆ, ಈ ಜಮೀನನ್ನು ಇವರಿಗೆ ಬಿಟ್ಟುಕೊಟ್ಟರೆ ಆತ್ಮಕ್ಕೂ ಶಾಂತಿ ಸಿಗಲಿದೆ. ಬೇರೆ ಸ್ಥಳದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಲು ಕ್ರಮ ವಹಿಸಲಾಗುವುದು ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಘಟನೆಯ ಸಂಬಂಧ ಮೃತ ರಾಜಮ್ಮ ರವರ ಸಂಬಂಧಿಕರು ದೂರು ನೀಡಲು ಹೋದರೆ ದೂರು ತೆಗೆದುಕೊಳ್ಳುತ್ತಿಲ್ಲ ಎಂಬುದು ಗಮನಕ್ಕೆ ಬಂದ ತಕ್ಷಣ ಮೊದಲು ದೂರು ದಾಖಲು ಮಾಡಿಕೊಳ್ಳಿ ಆನಂತರ ವಿಚಾರಣೆ ನಡೆದು ಸತ್ಯಾಂಶ ಹೊರಬರಲಿ ಎಂದು ತಿಳಿಸಿದ್ದೇನೆ. ಗ್ರಾಮಸ್ಥರಿಗೂ ದೂರು ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.





