ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು
ಹನೂರು: ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಆರು ಹಸುಗಳು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ಜರುಗಿದೆ.
ಹನೂರು ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದ ಪರಶಿವಮೂರ್ತಿ ಆರ್ ಎಂಬುವರಿಗೆ ಸೇರಿದ ಆರು ಹಸುಗಳು ಮೇಲ್ನೋಟಕ್ಕೆ ವಿಷ ಪ್ರಾಶನದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಘಟನೆ ವಿವರ: ಹನೂರು ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದ ನಿವಾಸಿ ಪರಶಿವಮೂರ್ತಿ ಎಂಬುವವರು ತಮ್ಮ ಜಮೀನಿನಲ್ಲಿ ಆರು ಹಸುಗಳನ್ನು ಮೇವು ಮೇಯಲು ಬಿಟ್ಟಿದ್ದರು. ಆದರೆ ಏಕಾಏಕಿ ಆರು ಹಸುಗಳು ಸ್ಥಳದಲ್ಲಿಯೇ ಮೃತಪಟ್ಟಿವೆ.
ಹಸುಗಳ ಮಾಲೀಕ ಪರಶಿವಮೂರ್ತಿ ಮಾತನಾಡಿ, ನಮ್ಮ ಜಮೀನಿನಲ್ಲಿ ಆರು ಹಸುಗಳನ್ನು ಮೇವು ಮೇಯಲು ಬಿಟ್ಟಿದ್ದೆವು. ಆದರೆ ಏಕಾಏಕಿ ಹಸುಗಳು ಮೃತಪಟ್ಟಿವೆ. ಮೇಲ್ನೋಟಕ್ಕೆ ಯಾರೋ ಕಿಡಿಗೇಡಿಗಳು ವಿಷ ಹಾಕಿ ಕೊಂದಿದ್ದಾರೆ. ಹಸುಗಳ ಬಾಯಲ್ಲಿ ನೊರೆ ತುಂಬಿಕೊಂಡು ಹೊಟ್ಟೆ ಊದಿ ಕೊಂಡಿದೆ. ತಪ್ಪಿತಸ್ಥ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಪರಿಹಾರ ಕೊಡುವಂತೆ ಮನವಿ ಮಾಡಿದ್ದಾರೆ.
ಶಾಸಕರಿಂದ ಸ್ಪಂದನೆ: ಶೆಟ್ಟಳ್ಳಿ ಗ್ರಾಮದ ಪರಶಿವಮೂರ್ತಿ ಎಂಬುವವರಿಗೆ ಸೇರಿದ ಆರು ಹಸುಗಳು ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಶಾಸಕ ಎಂ ಆರ್ ಮಂಜುನಾಥ್ ಪಶು ವೈದ್ಯಾಧಿಕಾರಿ ಡಾ. ಸಿದ್ದರಾಜುರವರಿಗೆ ದೂರವಾಣಿ ಕರೆ ಮುಖಾಂತರ ಮಾತನಾಡಿ ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಸೂಕ್ತ ವರದಿ ನೀಡಬೇಕು. ಒಟ್ಟಾರೆ ಹಸುಗಳ ಸಾವಿಗೆ ಕಾರಣವಾಗಿರುವುದನ್ನು ಪತ್ತೆ ಹಚ್ಚಬೇಕು ಎಂದು ಸೂಚನೆ ನೀಡಿದ್ದಾರೆ. ಇದಲ್ಲದೆ ರೈತನಿಗೆ ಧೈರ್ಯ ತುಂಬಿ ಕ್ಷಣಾರ್ಧದಲ್ಲಿಯೇ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.



