ಹನೂರು: ತಾಲ್ಲೂಕಿನ ಪ್ರಸಿದ್ದ ಮಹದೇಶ್ವರ ಸ್ವಾಮಿ ಸೇವಾ ಸಮಿತಿಯ ವತಿಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ಅಮವಾಸ್ಯೆ, ಶಿವರಾತ್ರಿ,ಯುಗಾದಿ, ದೀಪಾವಳಿ ಸಂದರ್ಭಗಳಲ್ಲಿ ಕನಕಪುರ, ರಾಮನಗರ, ಪಾಂಡವಪುರ, ಮಂಡ್ಯ, ಬೆಂಗಳೂರು ಹಾಗೂ ಇನ್ನಿತರ ಜಿಲ್ಲೆಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹರಕೆ ಹೊತ್ತ ಲಕ್ಷಾಂತರ ಭಕ್ತರು ನೂರಾರು ಕಿಲೋ ಮೀಟರ್ ಪಾದಯಾತ್ರೆಯ ಮೂಲಕ ಮಾದಪ್ಪನ ದರ್ಶನ ಪಡೆಯುತ್ತಾರೆ. ಅದರಂತೆ ಹನೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಾದಪ್ಪನ ಭಕ್ತರು ಪಾದಯಾತ್ರೆಯನ್ನು ಮಾಡಿ ತಮ್ಮ ಹರಕೆ ತೀರಿಸಿದ್ದಾರೆ.
ಮಲೆಮಹದೇಶ್ವರ ಸ್ವಾಮಿಯ ಸೇವಾ ಸಮಿತಿ ಅಧ್ಯಕ್ಷರಾದ ಗಂಗಾಧರ ಮಾತನಾಡಿ ನಾವು ಕಳೆದ 19 ವರ್ಷಗಳ ಹಿಂದೆ 20 ಮಂದಿ ಯ ಮೂಲಕ ಪಾದಯಾತ್ರೆ ಪ್ರಾರಂಭಿಸಲಾಯಿತು, ಇದೀಗ ಸುಮಾರು 2ಸಾವಿರಕ್ಕೂ ಹೆಚ್ಚು ಮಲೆಮಾದೇಶ್ವರ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.ಪಾದಯಾತ್ರೆಗೆ ಬರುವ ಭಕ್ತಾದಿಗಳಿಗೆ ನೂರಾರು ದಾನಿಗಳು ನೀಡಿರುವ ಆಹಾರ ಪದಾರ್ಥಗಳಿಂದ ಬೆಳಗಿನ ತಿಂಡಿ ಮಧ್ಯಾಹ್ನದ ಊಟ ವಿತರಣೆ ಮಾಡಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಹದೇಶ್ವರ ಸ್ವಾಮಿಯ ಭಕ್ತರು ಮಾದಪ್ಪನಿಗೆ “ಉಘೇ ಉಘೇ ಮಾದಪ್ಪ”ಎಂಬ ಘೋಷಣೆಗಳನ್ನು ಕೂಗುತ್ತಾ ಪಾದಯಾತ್ರೆ ಗೆ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ ಸೇವಾ ಸಮಿತಿ ಸದಸ್ಯರುಗಳಾದ ನಾರಾಯಣ್, ಶಂಕರ್, ಶಶಿ, ನಾಗೇಂದ್ರ, ಶಿವಣ್ಣ,ನಾಗಣ್ಣ,ಜಡೇಸ್ವಾಮಿ ಸೇರಿದಂತೆ ನೂರಾರು ಸದಸ್ಯರುಗಳು ಹಾಜರಿದ್ದರು.