ಚಾಮರಾಜನಗರ: ನಗರದ ಪ್ರಸಿದ್ಧ ದೊಡ್ಡರಸಿನ ಕೊಳದ ಬಳಿ ಕಳಪೆ ಯುಜಿಡಿ ಕಾಮಗಾರಿ ಮಾಡಲಾಗಿ ದೊಡ್ಡರಸಿನ ಕೊಳದ ಕಟ್ಟೆ ಹೊಡೆದು ಆ ಮಾರ್ಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ನಗರದ ಖಾಸಗಿ ಬಸ್ ನಿಲ್ದಾಣದಿಂದ ಹಳೆ ಆರ್.ಟಿ.ಓ ವೃತ್ತಕ್ಕೆ ತೆರಳುವ ಮಾರ್ಗದಲ್ಲಿ ಕೊಳದ ಸಮೀಪ ಯುಜಿಡಿ ಕಾಮಗಾರಿ ನಡೆಸಲಾಗಿತ್ತು, ಹತ್ತಿರದಲ್ಲಿ ಪುರಾತನವಾದ ದೊಡ್ಡರಸಿನ ಕೊಳವಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಉತ್ತಮ ಕಾಮಗಾರಿಯನ್ನು ನಡೆಸದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ಕೊಳದ ಕಟ್ಟೆ ಹೊಡೆದು ರಸ್ತೆ ಕುಸಿಯುವ ಹಂತಕ್ಕೆ ತಲುಪಿದೆ. ಸದ್ಯಕ್ಕೆ ಕೊಳದ ನೀರು ಖಾಸಗಿ ಬಸ್ ನಿಲ್ದಾಣಕ್ಕೆ ಹರಿದು ಹೋಗುತ್ತಿದ್ದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಹಾಗೂ ನಗರಸಭಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಿ ಆ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಿದ್ದಾರೆ.