ಇಂದು ( ಡಿಸೆಂಬರ್ 29 ) ಮೈಸೂರಿನ ವರುಣದಲ್ಲಿ ಒಳಚರಂಡಿ ಕಾಮಗಾರಿಯ ವೇಳೆ ಜೈನ ಶಿಲ್ಪಗಳು ಪತ್ತೆಯಾಗಿವೆ. ಈ ಶಿಲ್ಪಗಳು ಮುರಿದ ಸ್ಥಿತಿಯಲ್ಲಿ ಲಭ್ಯವಾಗಿದ್ದು, ಅವುಗಳನ್ನು ಪುರಾತತ್ವ ಸಂಗ್ರಹಾಲಯಕ್ಕೆ ಉಪನಿರ್ದೇಶಕಿ ಮಂಜುಳಾ ಅವರು ಕಳುಹಿಸಿಕೊಟ್ಟಿದ್ದಾರೆ.
ಕೈ ಹಾಗೂ ಕಾಲುಗಳಲ್ಲಿದ ಗೊಮ್ಮಟ್ಟನ ಶಿಲ್ಪ, ಕೇವಲ ತಲೆ ಮಾತ್ರ ಇರುವ ಒಂದು ಶಿಲ್ಪ ಹಾಗೂ ಹೆಣ್ಣು ದೇವರ ಒಂದು ಶಿಲ್ಪ ಪತ್ತೆಯಾಗಿವೆ. ಇನ್ನು ಈ ಶಿಲ್ಪಗಳು 11ನೇ ಶತಮಾನದ್ದು ಎನ್ನಲಾಗುತ್ತಿದ್ದು, ಗಂಗರು ಹಾಗೂ ಹೊಯ್ಸಳರ ಆಳ್ವಿಕೆಯಲ್ಲಿ ವರುಣ, ವಾಜಮಂಗಲ ಹಾಗೂ ವರಕೋಡು ದೊಡ್ಡ ಜೈನ ಕೇಂದ್ರಗಳಾಗಿದ್ದವು.
ಈ ಶಿಲ್ಪಗಳು ಪತ್ತೆಯಾಗುತ್ತಿದ್ದಂತೆ ಕುತೂಹಲದಿಂದ ಸ್ಥಳೀಯರು ನೋಡಲು ಸ್ಥಳಕ್ಕೆ ಆಗಮಿಸಿದ್ದು, ಡಾ ಎನ್ಎಸ್ ರಂಗರಾಜು, ಡಾ ಶಶಿಧರ್, ಶ್ರೀ ಪ್ರಸನ್ನ ಕುಮಾರ್ ವಿನೋದ್ ಜೈನ್ ಸಹ ಸ್ಥಳಕ್ಕೆ ಭೇಟಿ ನೀಡಿದ್ದರು.





