ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಕಡೆಮನುಗನಹಳ್ಳಿಯಲ್ಲಿ ಯುವಕನೋರ್ವನಿಗೆ ತಮ್ಮ ಮಗಳನ್ನು ಮದುವೆ ಮಾಡಿಸಿಕೊಡುವುದಾಗಿ ಕುಟುಂಬವೊಂದು ವಂಚಿಸಿದ ಪ್ರಕರಣ ನಡೆದಿದೆ.
ಅಶೋಕ್ ಎಂಬಾತ ಹಣ ಕಳೆದುಕೊಂಡಿದ್ದು, ಕನ್ಯೆ ಕೊಡಲಿಲ್ಲ ಹಾಗೂ ಅತ್ತ ಸಾಲದ ರೂಪದಲ್ಲಿ ಕೊಟ್ಟ ಹಣವನ್ನೂ ಸಹ ವಾಪಸ್ ಕೊಡಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಇದೇ ಗ್ರಾಮದ ಯುವತಿ ಸಿಂಚನ, ಆಕೆಯ ತಂದೆ ವೆಂಕಟೇಶ್ ಹಾಗೂ ತಾಯಿ ಲಕ್ಷ್ಮಿ ವಿರುದ್ಧ ದೂರು ದಾಖಲಿಸಿದ್ದಾನೆ.
ಅಶೋಕ್ ತನ್ನ ತಂದೆ ಹಾಗೂ ತಾಯಿ ಜತೆ ಹುಣಸೂರು ತಾಲೂಕಿನ ಕಡೆಮನುಗನಹಳ್ಳಿಯಲ್ಲಿ ವಾಸವಿದ್ದು, ಬ್ಯುಸಿನೆಸ್ ಕರೆಸ್ಪಾಂಡಿಂಗ್ಸ್ ಹಾಗೂ ವ್ಯವಸಾಯ ಮಾಡುತ್ತಿದ್ದಾನೆ. ಇದೇ ಗ್ರಾಮದ ವೆಂಕಟೇಶ್ ಹಾಗೂ ಲಕ್ಷ್ಮಿ ದಂಪತಿ ತಮ್ಮ ಮಗಳಾದ ಸಿಂಚನಳನ್ನು ಮದುವೆಯಾಗುವಂತೆ 2022ರ ಜನವರಿಯಲ್ಲಿ ಅಶೋಕ್ ಅವರ ಮನೆಗೆ ಹೋಗಿದ್ದಾರೆ. ಇದಕ್ಕೆ ಅಶೋಕ್ ಪೋಷಕರೂ ಸಹ ಒಪ್ಪಿಗೆ ಸೂಚಿಸಿದ್ದಾರೆ.
ಆದರೆ ಯುವತಿ ಸಿಂಚನ ತಾನು ಇನ್ನೂ ಒಂದು ವರ್ಷ ವಿದ್ಯಾಭ್ಯಾಸ ಮಾಡಬೇಕು ಎಂದು ಹೇಳಿದ್ದು, ಇದಕ್ಕೆ ಅಶೋಕ್ ಪೋಷಕರು ಒಪ್ಪಿಗೆ ನೀಡಿದ್ದಾರೆ. ಬಳಿಕ ಎರಡೂ ಕುಟುಂಬದವರು ವಿವಾಹದ ಮಾತುಕತೆಯನ್ನು ನಡೆಸಿದ್ದರು. ಬಳಿಕ ಸಿಂಚನ ಹಾಗೂ ಅಶೋಕ್ ದೂರವಾಣಿಯಲ್ಲಿ ಮಾತನಾಡಲು ಆರಂಭಿಸಿದ್ದು, ಸಿಂಚನ ತನ್ನ ಮನೆಯ ಕಷ್ಟಗಳನ್ನೆಲ್ಲ ಅಶೋಕ್ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೇ ವ್ಯವಸಾಯ ಮಾಡಲು ಮತ್ತು ವ್ಯವಸಾಯದಿಂದ ಸಾಲ ಮಾಡಿದ ಕಾರಣ ನೀಡಿ ಸಿಂಚನ ತಂದೆ 15 ಲಕ್ಷ, ಸಿಂಚನ ತಾಯಿ 8 ಲಕ್ಷ ಹಾಗೂ ಸಿಂಚನ ವಿದ್ಯಾಭ್ಯಾಸಕ್ಕಾಗಿ 2 ಲಕ್ಷ ರೂಪಾಯಿಗಳನ್ನು ಪಡೆದು ಮೋಸ ಮಾಡಿದ್ದಾರೆ ಎಂದು ಅಶೋಕ್ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.