ಗುಂಡ್ಲುಪೇಟೆ: ಪಟ್ಟಣದ ಡಿ. ದೇವರಾಜ ಅರಸು ಕ್ರೀಡಾಂಗಣದಲ್ಲಿ ಕನಕ ಜಯಂತಿ ಕಾರ್ಯಕ್ರಮ ಆಯೋಜನೆಯಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ ರಂಜಿತ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಾರಿಯಾಗಿದ್ದ. ಯತೀಂದ್ರ ಸಿದ್ದರಾಮಯ್ಯ ರಾಮಮಂದಿರ ಹಾಗೂ ನರೇಂದ್ರ ಮೋದಿ ಕುರಿತು ಮಾತನಾಡುವಾಗ ಈ ಘಟನೆ ನಡೆದಿದೆ.
ಸಚಿವ ಬೈರತಿ ಸುರೇಶ್ ಗುಂಡ್ಲುಪೇಟೆ ಪಿಐ ಹಾಗೂ ಪಿಎಸ್ಐ ಜತೆ ಮಾತನಾಡಿ ಕೂಡಲೇ ಕಿಡಿಗೇಡಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ, ಯಾವುದೇ ಕಾರಣಕ್ಕೂ ಜಾಮೀನು ಕೊಡಬೇಡಿ ಎಂದು ಸೂಚಿಸಿದರು.
ಅರ್ಧ ಗಂಟೆ ಬಳಿಕ ಯತೀಂದ್ರ ಸಿದ್ದರಾಮಯ್ಯ ಅವರನ್ನು ನಿಂದಿಸಿದ್ದ ರಂಜಿತ್ ಮತ್ತೆ ಸಮಾರಂಭ ನಡೆದಿದ್ದ ಕ್ರೀಡಾಂಗಣಕ್ಕೆ ಬಂದಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸಮಾರಂಭಕ್ಕೆ ಆಗಮಿಸಿದ್ದ ಜನರು ರಂಜಿತ್ ಮೇಲೆ ಹಲ್ಲೆಗೆ ಮುಂದಾಗಿದ್ದು, ಪರಿಸ್ಥಿತಿ ಅರಿತ ಪೊಲೀಸರು ಆತನನ್ನು ಠಾಣೆಗೆ ಎಳೆದೊಯ್ದಿದ್ದಾರೆ.





