ನಂಜನಗೂಡು ಪಟ್ಟಣದ ಹೆಜ್ಜಿಗೆ ಸೇತುವೆ ಬಳಿ ಕಪಿಲಾ ನದಿಯ ಸುಳಿಗೆ ಸಿಲುಕಿ ಮೂವರು ಶಬರಿಮಲೆ ಯಾತ್ರಿಕರು ಮೃತಪಟ್ಟಿರುವ ಘಟನೆ ಇಂದು ( ಜನವರಿ 19 ) ಬೆಳಗ್ಗೆ ನಡೆದಿದೆ.
ತುಮಕೂರು ಮೂಲದ ಗವಿರಂಗ ( 19 ) ರಾಕೇಶ್ ( 19 ) ಹಾಗೂ ಅಪ್ಪು ( 16 ) ಮೃತ ದುರ್ದೈವಿಗಳಾಗಿದ್ದಾರೆ. ಶಬರಿಮಲೆ ದರ್ಶನ ಮುಗಿಸಿಕೊಂಡು ತಡರಾತ್ರಿ ನಂಜನಗೂಡು ನಂಜುಂಡೇಶ್ವರ ಸ್ವಾಮಿಯ ದರ್ಶನ ಮಾಡುವ ಸಲುವಾಗಿ ಕ್ಷೇತ್ರಕ್ಕೆ ಬಂದ ಐವರು ಭಕ್ತಾದಿಗಳು ಬೆಳಗ್ಗೆ ಸ್ನಾನ ಮಾಡಲು ನದಿಗೆ ಇಳಿದಿದ್ದಾರೆ.
ಈ ಐವರೂ ಸಹ ನದಿಯಲ್ಲಿದ್ದ ಸುಳಿಗೆ ಸಿಲುಕಿದ್ದು, ಈ ಪೈಕಿ ಮೂವರು ಸಾವನ್ನಪ್ಪಿದ್ದರೆ, ಇನ್ನುಳಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂಜನಗೂಡು ಪಟ್ಟಣದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃತರ ದೇಹಗಳನ್ನು ಹೊರತೆಗೆದಿದ್ದಾರೆ. ಈ ಕುರಿತು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





