Mysore
24
moderate rain

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ರಾಜ್ಯದ 14 ಆನೆಗಳನ್ನು ಭೋಪಾಲ್‌ ಗೆ ಕಳುಹಿಸುತ್ತಿರುವುದೇಕೇ ?

ದೇಶದಲ್ಲಿಯೇ ಅತಿ ಹೆಚ್ಚು ಆನೆಗಳಿರುವ ಕರ್ನಾಟಕ ದೂರದ ಮಧ್ಯಪ್ರದೇಶಕ್ಕೆ ತನ್ನ 14 ಸಾಕಾನೆಗಳನ್ನು ಕಳುಹಿಸಿಕೊಡುತ್ತಿದೆ. 

ಕೊಡಗು : ಕೊಡಗಿನ ದುಬಾರೆ ಆನೆ ಶಿಬಿರದಿಂದ ಹೊರಟ ಐದು ಆನೆಗಳು ಈಗಾಗಲೇ ಭೋಪಾಲ್‌ ತಲುಪಿವೆ. ಆನೆಗಳ ಜತೆ ಮಾವುತರು, ಉಸ್ತುವಾರಿಗಳೂ ತೆರಳಿದ್ದು, ಅಲ್ಲಿನ ಸಿಬ್ಬಂದಿಗೆ ತರಬೇತಿ ನೀಡಿದ ಬಳಿಕ ರಾಜ್ಯಕ್ಕೆ ವಾಪಸ್ಸಾಗಲಿದ್ದಾರೆ. ಬಂಡೀಪುರದ ರಾಮಾಪುರ ಶಿಬಿರದಿಂದ ಐದು, ಶಿವಮೊಗ್ಗದಲ್ಲಿರುವ ಸಕ್ಕರೆ ಬೈಲು ಆನೆ ಶಿಬಿರದಿಂದ ನಾಲ್ಕು ಆನೆಗಳು ಸದ್ಯದಲ್ಲಿಯೇ ಮಧ್ಯಪ್ರದೇಶಕ್ಕೆ ಹೊರಡಲಿವೆ.

ಆದರೆ ತಾವು ಮಕ್ಕಳಂತೆ ಪೋಷಿಸಿ, ಬೆಳೆಸಿದ ಆನೆಗಳನ್ನು ಅನ್ಯ ರಾಜ್ಯಕ್ಕೆ ಸ್ಥಳಾಂತರಿಸುವ ಈ ಯೋಜನೆಗೆ ಮಾವುತರು, ಕಾವಾಡಿಗಳ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ರಾಜ್ಯದ ಆನೆ ಶಿಬಿರಗಳಲ್ಲಿ ಆನೆಗಳ ಅಸಹಜ ಸಾವಿನ ಬಗ್ಗೆ ತನಿಖೆ ನಡೆಸಲು ಕೋರ್ಟ್‌ ನೇಮಿಸಿದ್ದ ತಜ್ಞರ ಸಮಿತಿ ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿದ್ದ ವೇಳೆ ಇಲ್ಲಿ 32 ಆನೆಗಳು ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಒಂದು ಶಿಬಿರದಲ್ಲಿ 15ಕ್ಕೂ ಹೆಚ್ಚು ಆನೆಗಳು ಇರುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿತ್ತು.
ಈ ಬಳಿಕ ಕುಶಾಲನಗರದ ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶದ ಬಳಿ ಹೊಸ ಆನೆ ಶಿಬಿರ ಆರಂಭಿಸಿ ಅಲ್ಲಿಗೆ ಒಂದಷ್ಟು ಆನೆಗಳನ್ನು ಸ್ಥಳಾಂತರಿಸಲಾಗಿತ್ತು.


ರಾಜ್ಯದಲ್ಲಿ ಸದ್ಯ 10 ಆನೆ ಶಿಬಿರಗಳಿದ್ದು ಹೆಚ್ಚಿನ ಶಿಬಿರಗಳಲ್ಲಿ 15ಕ್ಕಿಂತ ಹೆಚ್ಚು ಆನೆಗಳಿವೆ. ಒಂದಷ್ಟು ಸಾಕಾನೆಗಳನ್ನು ಆನೆಗಳ ಕೊರತೆ ಇರುವ ಮಧ್ಯಪ್ರದೇಶಕ್ಕೆ ಕಳುಹಿಸಿಕೊಟ್ಟರೆ ಹೊಸದಾಗಿ ಆನೆ ಶಿಬಿರ ತೆರೆಯುವ ಅಗತ್ಯ ಇರುವುದಿಲ್ಲ ಎನ್ನುವುದು ಸರಕಾರದ ಯೋಚನೆ. ಕರ್ನಾಟಕದಂತೆ ಮಧ್ಯಪ್ರದೇಶದಲ್ಲೂ ವನ್ಯಮೃಗಗಳ ಹಾವಳಿ ವಿಪರೀತವಾಗಿದೆ. ಆನೆ, ಹುಲಿ, ಚಿರತೆ ಹಿಡಿಯುವ ಕಾರ್ಯಾಚರಣೆಗೆ ಆ ರಾಜ್ಯಕ್ಕೂ ಪಳಗಿದ ಆನೆಗಳ ಅವಶ್ಯಕತೆ ಇದೆ.

ಉಭಯ ರಾಜ್ಯಗಳ ಅವಶ್ಯಕತೆಯನ್ನು ಮನಗಂಡು ದಸರಾ ಮೆರವಣಿಗೆ, ಹುಲಿ ಮತ್ತು ಕಾಡಾನೆ ಕಾರ್ಯಾಚರಣೆಗೆ ಬಳಸುವ ಆನೆಗಳನ್ನು ಹೊರತುಪಡಿಸಿ 14 ಸಾಕಾನೆಗಳನ್ನು ಮಧ್ಯಪ್ರದೇಶಕ್ಕೆ ಕಳುಹಿಸಲು ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದೆ. ಎರಡೂ ರಾಜ್ಯಗಳ ಹಿರಿಯ ಅಧಿಕಾರಿಗಳ ತಂಡ ಶಿಬಿರಗಳಿಗೆ ಭೇಟಿ ನೀಡಿ ಹಸ್ತಾಂತರ ಮಾಡಬೇಕಾದ ಸಾಕಾನೆಗಳನ್ನು ಪಟ್ಟಿ ಮಾಡಿ, ಆರೋಗ್ಯ ಪರಿಶೀಲನೆ ನಡೆಸಿದ ಬಳಿಕ ಸಾಗಾಟ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಒಂದು ತಿಂಗಳೊಳಗೆ ಎಲ್ಲ 14 ಆನೆಗಳು ಭೋಪಾಲ್‌ ಸೇರಲಿವೆ.

ಕೊಡಗಿನ ದುಬಾರೆ ಹಾಗೂ ಹಾರಂಗಿ ಸಾಕಾನೆ ಶಿಬಿರದಲ್ಲಿಒಟ್ಟು 32 ಆನೆಗಳಿದ್ದವು. ಇದರಲ್ಲಿಗಂಡಾನೆಗಳಾದ ಜನರಲ್‌ ತಿಮ್ಮಯ್ಯ (8), ಜನರಲ್‌ ಕಾರ್ಯಪ್ಪ (8), ವಲ್ಲಿ (40), ಲವ (21), ಮಾರುತಿ (20) ಮಧ್ಯಪ್ರದೇಶಕ್ಕೆ ಹೊರಟಿವೆ. ಈಗ ಎರಡೂ ಶಿಬಿರಗಳಲ್ಲಿ 27 ಆನೆಗಳಿವೆ.

ಬಂಡಿಪುರದ ರಾಮಾಪುರ ಆನೆ ಶಿಬಿರದಲ್ಲಿ19 ಆನೆಗಳಿದ್ದು ಇವುಗಳಲ್ಲಿಐದು ಆನೆಗಳಾದ ಗಣೇಶ (17), ಕೃಷ್ಣ (21), ಗಜ (7), ಮರ್ಸಿಯ(7- ಹೆಣ್ಣು) ಪೂಜಾ (9-ಹೆಣ್ಣು) ಸ್ಥಳಾಂತರಗೊಂಡರೆ ಶಿಬಿರದಲ್ಲಿ ಕೇವಲ 14 ಆನೆಗಳು ಉಳಿದುಕೊಳ್ಳಲಿವೆ.

ಶಿವಮೊಗ್ಗದ ಸಕ್ರೆಬೈಲಿನಲ್ಲಿ ಪ್ರಸ್ತುತ 19 ಆನೆಗಳಿದ್ದು, ಇವುಗಳಲ್ಲಿ ನಾಲ್ಕು ಆನೆಗಳಾದ ರವಿ (25), ಶಿವ (6), ಮಣಿಕಂಠ (35), ಬೆಂಗಳೂರು ಗಣೇಶ (36) ಸ್ಥಳಾಂತರಗೊಳ್ಳಲಿವೆ. ಒಟ್ಟು 14 ಆನೆಗಳಲ್ಲಿ 12 ಗಂಡು ಮತ್ತು ಎರಡು ಹೆಣ್ಣಾನೆಗಳು ಮಧ್ಯಪ್ರದೇಶಕ್ಕೆ ಪಯಣ ಬೆಳಸಲಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!